ಬೆಂಗಳೂರು: ಬೆಂಗಳೂರು (Bengaluru) ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ಅವರ ಹೆಸರು ಹಾಗೂ ಫೋಟೋ ಬಳಸಿ ವಂಚಕರು ಹಣ ಕೇಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ವಾಟ್ಸಾಪ್ನಲ್ಲಿ ಐಪಿಎಸ್ ಅಧಿಕಾರಿ ಅಕ್ಷಯ್ ಅವರ ಪ್ರೊಫೈಲ್ ಫೋಟೋ ಹಾಗೂ ಹೆಸರನ್ನೇ ಬಳಸಿಕೊಂಡು ಬೇರೆ ಮೊಬೈಲ್ ಸಂಖ್ಯೆಯಿಂದ ನಕಲಿ ಖಾತೆ ರಚಿಸಿ ಹಣ ವರ್ಗಾಯಿಸುವಂತೆ ಸಂದೇಶ ಕಳುಹಿಸಲಾಗುತ್ತಿದೆ. ಈ ನಕಲಿ ಖಾತೆಯಿಂದ ಡಿಸಿಪಿ ಅಕ್ಷಯ್ ಅವರ ಸ್ನೇಹಿತರು ಹಾಗೂ ಪರಿಚಿತರಿಗೆ ತುರ್ತಾಗಿ ಹಣ ಬೇಕಿದೆ ಎಂದು ಮೆಸೇಜ್ ಕಳುಹಿಸಲಾಗಿದೆ. ವಂಚಕರು ಕಳುಹಿಸಿರುವ ಸಂದೇಶದಲ್ಲಿ, ತುರ್ತಾಗಿ ಒಂದು ಪ್ರಾಸ್ಪೆಕ್ಟ್ ಖಾತೆಗೆ ಹಣ ಜಮಾ ಮಾಡಬೇಕಿದ್ದು, ಆನ್ಲೈನ್ ಬ್ಯಾಂಕ್ ವರ್ಗಾವಣೆಯಲ್ಲಿ ಸಮಸ್ಯೆ ಎದುರಾಗಿದೆ. ನಾನು ಈಗ ಸಭೆಯಲ್ಲಿ ಭಾಗವಹಿಸುತ್ತಿರುವುದರಿಂದ ನೀವು ಹಣ ವರ್ಗಾಯಿಸಿದರೆ, ದಿನದ ಅಂತ್ಯದೊಳಗೆ ಮರುಪಾವತಿಸುತ್ತೇನೆ ಎಂದು ಉಲ್ಲೇಖಿಸಲಾಗಿದೆ.
ಈ ರೀತಿಯ ಸಂದೇಶಗಳನ್ನು ಪಡೆದ ಕೆಲ ಸ್ನೇಹಿತರು ಅನುಮಾನಗೊಂಡು ವಿಷಯವನ್ನು ಸ್ವತಃ ಡಿಸಿಪಿ ಅಕ್ಷಯ್ ಅವರ ಗಮನಕ್ಕೆ ತಂದಿದ್ದಾರೆ. ಇದರಿಂದ ವಂಚನೆ ಯತ್ನ ಬೆಳಕಿಗೆ ಬಂದಿದ್ದು, ಈಗಾಗಲೇ 3–4 ಮಂದಿಗೆ ಈ ನಕಲಿ ಖಾತೆಯಿಂದ ಹಣ ಕೇಳಿರುವುದು ತಿಳಿದುಬಂದಿದೆ. ವಂಚಕರ ಸಂದೇಶಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಬಾರದು ಹಾಗೂ ಹಣ ವರ್ಗಾಯಿಸಬಾರದು ಎಂದು ಡಿಸಿಪಿ ಅಕ್ಷಯ್ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರಷ್ಟೇ ಅಲ್ಲದೆ ಗಣ್ಯರು ಹಾಗೂ ಉನ್ನತ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚಕರು ಹಣ ಪೀಕುವ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ನ ನಕಲಿ ಖಾತೆಗಳ ಮೂಲಕ ನಡೆಯುವ ಈ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರನ್ನು ಬಂಧಿಸಿದ ಸಿಬಿಐ :
ಭ್ರಷ್ಟಾಚಾರದ (Bribe) ಪ್ರಕರಣದಲ್ಲಿ ಬೆಂಗಳೂರಿನ (Bengaluru) ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರಾಗಿರುವ ಓಬ್ಬ ಅಧಿಕಾರಿ ಸೇರಿದಂತೆ ಇಬ್ಬರನ್ನು ಸಿಬಿಐ (CBI) ಬಂಧಿಸಿದೆ. 9.5 ಲಕ್ಷ ಲಂಚ ಪಡೆದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೆಸರ್ಸ್ ಸುಧೀರ್ ಗ್ರೂಪ್ ಆಫ್ ಕಂಪನೀಸ್ ಎಂಬ ಖಾಸಗಿ ಕಂಪನಿಯ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದಂತೆ, ಕಂಪನಿಗೆ ಬೇಕಾದಂತೆ ಪರೀಕ್ಷಾ ವರದಿಗಳನ್ನು ನೀಡಲು ಲಂಚ ಪಡೆದ ಆರೋಪ ಕೇಳಿಬಂದಿತ್ತು.
ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಬೆಂಗಳೂರಿನ ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರು ಮತ್ತು ಇತರ ಖಾಸಗಿ ವ್ಯಕ್ತಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಜನವರಿ 8 ರಂದು ಪ್ರಕರಣ ದಾಖಲಿಸಿಕೊಂಡಿತ್ತು.
ಎಫ್ಐಆರ್ ದಾಖಲಿಸಿದ ನಂತರ, ಸಿಬಿಐ ಬಲೆ ಬೀಸಿ ಬೆಂಗಳೂರಿನ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಜಂಟಿ ನಿರ್ದೇಶಕರು ಮತ್ತು ಖಾಸಗಿ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿತ್ತು. ಬೆಂಗಳೂರಿನಲ್ಲಿ 9.5 ಲಕ್ಷ ರೂಪಾಯಿ ಲಂಚದ ವಹಿವಾಟು ನಡೆಸುತ್ತಿದ್ದಾಗ ಬಂಧಿಸಲಾಗಿದೆ.
ಇದನ್ನೂ ಓದಿ: ಪವಿತ್ರಾ ಗೌಡಗೆ ಮನೆ ಊಟ- ಸೋಮವಾರಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್!