ನವದೆಹಲಿ: ಬಿಜೆಪಿ ನಾಯಕಿ ದಿ.ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರು ದೆಹಲಿ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ.
ತಾಯಿಯಂತೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮುಂದುವರೆಯುವ ಹಂಬಲ ಬಾನ್ಸುರಿ ಸ್ವರಾಜ್ ಅವರಿಗಿದ್ದು, 2024ರ ಲೋಕಸಭೆ ಚುನಾವಣೆ ಅಥವಾ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಾನ್ಸುರಿ ಸ್ವರಾಜ್ ಅವರು, ಬಿಜೆಪಿ ದೆಹಲಿ ಪ್ರದೇಶದ ಸಹ ಸಂಚಾಲಕರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ, ಬಿಎಲ್ ಸಂತೋಷ್, ವೀರೇಂದ್ರ ಸಚ್ದೇವ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಾನು ಬಿಜೆಪಿಯನ್ನು ತುಂಬಾ ಇಷ್ಟಪಡುತ್ತೇನೆ. ನಾನು ಬಿಜೆಪಿಗೆ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಬಿಜೆಪಿಯ ದೆಹಲಿ ಘಟಕ ನೀಡಿರುವ ಮಾಹಿತಿ ಪ್ರಕಾರ, ವಕೀಲ ವೃತ್ತಿಯಲ್ಲಿ 16 ವರ್ಷಗಳ ಅನುಭವ ಹೊಂದಿರುವ ಬಾನ್ಸುರಿ ಸ್ವರಾಜ್ ಅವರು 2007ರಲ್ಲಿ ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ಸೇರಿಕೊಂಡಿದ್ದರು. ಬಾನ್ಸುರಿ ಅವರು ಈಗಾಗಲೇ ಕಾನೂನು ವಿಷಯಗಳಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೆ ಮತ್ತು ಈ ಹಿನ್ನೆಲೆಯಲ್ಲಿ ಅವರ ನೇಮಕದಿಂದ ಬಿಜೆಪಿಗೆ ಮತ್ತಷ್ಟು ಆನೆಬಲ ದೊರೆಯುವ ನಿರೀಕ್ಷೆಯಿದೆ.
ಬಾನ್ಸುರಿ ಸ್ವರಾಜ್ ವಿದ್ಯಾಭ್ಯಾಸ: ಬಾನ್ಸುರಿ ಸ್ವರಾಜ್ ಲಂಡನ್ನ ವಾರ್ವಿಕ್ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ (ಆನರ್ಸ್) ಪದವಿ ಪಡೆದ ನಂತರ, ಅವರು ಕಾನೂನು ಅಧ್ಯಯನ ಮಾಡಲು ಲಂಡನ್ನ ಬಿಪಿಪಿ ಕಾನೂನು ಶಾಲೆಗೆ ಸೇರಿಕೊಂಡರು. ಸ್ವರಾಜ್ ಅವರು ಬ್ಯಾರಿಸ್ಟರ್ ಅಟ್ ಲಾ ಆಗಿ ಅರ್ಹತೆ ಪಡೆದರು ಮತ್ತು ಲಂಡನ್ನ ಇನ್ನರ್ ಟೆಂಪಲ್ನಿಂದ ಬಾರ್ಗೆ ಕರೆಸಿಕೊಂಡರು. ಇದರ ನಂತರ, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸೇಂಟ್ ಕ್ಯಾಥರೀನ್ ಕಾಲೇಜಿನಿಂದ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ