ನೆಲಮಂಗಲ: ಹಾಡಹಗಲೇ ಗನ್ (Gun) ಹಿಡಿದು ಓಡಾಡಿದ ಯುವಕನನ್ನು ನೆಲಮಂಗಲ (Nelamangala) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತನನ್ನು ಬಿಹಾರ ಮೂಲದ ಶುಭಂ ಎಂದು ಗುರುತಿಸಲಾಗಿದೆ. ಈತ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ.
ಗನ್ ಹಿಡಿದು ಓಡಾಟ ಯಾಕೆ..?: ಶುಭಂ ಮೂರು ವರ್ಷದಿಂದ ಪ್ರೀತಿಸುವಂತೆ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದಿದ್ದ. ಆದರೆ ಯುವತಿ ಆತನ ಪ್ರೀತಿ ನಿರಾಕರಿಸಿದ್ದಳು. ಹೀಗಾಗಿ ಆಕೆ ಬೇರೆಯವನನ್ನ ಪ್ರೀತಿ ಮಾಡುತ್ತಿದ್ದಾಳೆ ಎಂದುಕೊಂಡಿದ್ದ ಆರೋಪಿ, ಆನ್ಲೈನ್ನಲ್ಲಿ ಗನ್ ಖರೀದಿಸಿ ಕೊಲೆಗೆ ಮುಂದಾಗಿದ್ದ. ಆತ ಗನ್ ಹಿಡಿದು ಮಲ್ಲಾಪುರ ಗ್ರಾಮದ ರಸ್ತೆಯಲ್ಲಿ ಓಡಾಡಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಪ್ಲಾಸ್ಟಿಕ್ ಗೋಡೌನ್ಗೆ ಬೆಂಕಿ; ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಭಸ್ಮ
ಇತ್ತ ಯುವತಿ ಕಾಲೇಜ್ಗೆ ಹಾಲ್ ಟಿಕೆಟ್ ಪಡೆಯಲು ಊಬರ್ನಲ್ಲಿ ಬಂದಿದ್ದಳು. ಈ ವೇಳೆ ಊಬರ್ ಡ್ರೈವರ್ಗೆ ಯುವತಿ, ಶುಭಂ ಬಗ್ಗೆ ಹೇಳಿದ್ದಾಳೆ. ಊಬರ್ ಚಾಲಕ ಶಿವಕುಮಾರ್ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿ ಬಳಿಯಿದ್ದ ಕಂಟ್ರಿಮೇಡ್ ರಿವಾಲ್ವರ್ ಹಾಗೂ ನಾಲ್ಕು ಜೀವಂತ ಗುಂಡನ್ನು ವಶಕ್ಕೆ ಪಡೆದಿದ್ದಾರೆ.
ರಸ್ತೆ ವಿಭಜಕ ಮೇಲಿಂದ ಕಾರು ಜಂಪ್ ಮಾಡಿಸಿದ ಚಾಲಕ: ಕುಡಿದ ಮತ್ತಲ್ಲಿ ಕಾರು ಚಾಲಕನೊಬ್ಬ ಅಡ್ಡದಿಡ್ಡಿಯಾಗಿ ಕಾರು ಚಲಾಯಿಸಿ ಡಿವೈಡರ್ ಮೇಲೆ ಹಾರಿ ಹೋಟೆಲ್ಗೆ ಗುದ್ದಿದ ಘಟನೆ ಬೆಂಗಳೂರಿನ ಇಂದಿರಾನಗರದ 18ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಅಪಘಾತದ ವೇಳೆ ಅಲ್ಲೇ ರಸ್ತೆ ಬದಿಯಲ್ಲಿ ನಿಂತಿದ್ದ ಯುವಕ-ಯುವತಿಯರ ಗುಂಪು ಹಾಗೂ ಇಬ್ಬರು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವೇಳೆ ಹೋಟೆಲ್ನಲ್ಲಿ ಊಟ ಮುಗಿಸಿ ಆರು ಮಂದಿ ಹೊರಗಡೆ ನಿಂತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ಗೆ ಗುದ್ದಿದೆ. ಅಲ್ಲೇ ಇದ್ದ ಯುವಕ ಯುವತಿಯರ ಗುಂಪು ಘಟನೆಯಿಂದ ಪಾರಾಗಿದ್ದಾರೆ. ಅದೇ ಸಮಯದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ಬೈಕ್ ಸವಾರರು ಕೂಡ ಕಾರಿನ ಹೊಡೆತಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾದರೂ, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪವೂ ಅಂತರ ಕಡಿಮೆಯಾಗಿದ್ದರೆ, ರಸ್ತೆ ಬದಿಯಲ್ಲಿ ನಿಂತಿದ್ದ ಆರು ಮಂದಿ ಹಾಗೂ ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ.
ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.