ನವದೆಹಲಿ: ಕಾಂಗ್ರೆಸ್ ಮೂರನೇ ಪಟ್ಟಿಯ ಅಭ್ಯರ್ಥಿಗಳ ಹೆಸರುಗಳನ್ನು ಆಖೈರು ಮಾಡಲು ಕೈ ನಾಯಕರು ದೆಹಲಿಯಲ್ಲಿ ಸೇರಿ ಸಭೆ ನಡೆಸಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂವರೂ ರಾಹುಲ್ ಗಾಂಧಿಯವರೊಡನೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಎರಡು ಪಟ್ಟಿ ಬಿಡುಗಡೆ ಮಾಡಿದ್ದು ಬಹುತೇಕ ಕ್ಷೇತ್ರಗಳಿಗೆ ಹಸರು ಘೋಷಣೆಯಾಗಿದೆ. ಉಳಿದ 54 ಕ್ಷೇತ್ರಗಳಲ್ಲಿ ಯಾವುದೇ ಭಿನ್ನಮತ ಏಳದಂತೆ, ಅಸಮಮಾಧಾನ ಹೊಗೆಯಾಡದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕೈ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿರುವ ಸಿದ್ದರಾಮಯ್ಯ, ಕೋಲಾರದಲ್ಲೂ ಸಹ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೆಜಿ ಹಳ್ಳಿ ಗಲಭೆ ಕುಖ್ಯಾತಿಯ ಪುಲಿಕೇಶಿ ನಗರದ ಕ್ಷೇತ್ರದಲ್ಲಿ ಅಖಂಡ ಶ್ರೀನಿವಾಸ್ ರಿಗೆ ಮತ್ತೆ ಅವಕಾಶ ನೀಡಬೇಕೋ ಬೇಡವೋ ಎಂಬುದರ ಬಗ್ಗೆಯೂ ವರಿಷ್ಠರ ನಡುವೆ ಮಾತುಕತೆ ನಡೆದಿದೆ.