ಕಲಬುರಗಿ: ಗಣೇಶ ಕಟ್ಟೆ ನವೀಕರಣ ವಿಚಾರವಾಗಿ ಕಲಬುರ್ಗಿಯಲ್ಲಿ ಕೋಮು ಗಲಭೆ (Communal violence) ನಡೆದಿದೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಕಲಗಿಯಲ್ಲಿ ಘಟನೆ ನಡೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಗಣೇಶ ಪ್ರತಿಷ್ಠಾಪನೆ ಕಟ್ಟೆ ನವೀಕರಣಕ್ಕೆ ಹಿಂದು ಯುವಕರು ಮುಂದಾಗಿದ್ದರು. ಆದರೆ, ಗಣೇಶ ಕಟ್ಟೆಗೆ ಹೊಂದಿಕೊಂಡಂತೆ ಮಸೀದಿ ಇರುವ ಕಾರಣ ಸಂಘರ್ಷ ಉಂಟಾಗಿದೆ. ಎರಡು ಕೋಮಿನ ಜನರಿಂದ ಕಲ್ಲು ತೂರಾಟ ಮತ್ತು ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿಕೊಟ್ಟಿದ್ದಾರೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿ, ಭಾನುವಾರ ಸಂಜೆ ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಾಗ ಖಾಲಿಮಾಡಿಸುವ ವಿಚಾರವಾಗಿ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ನಲ್ಲಿ ಮಾಹಿತಿ ಹಾಕಿದ್ದ. ಈ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.