ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ನಿಲ್ಲಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ವೈ ʼಬಿಜೆಪಿʼಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದಾರೆ.
ವರುಣಾದಲ್ಲಿ ಸಿದ್ದರಾಮಯ್ಯರನ್ನು ಸೋಲಿಸುವಂತಹ ಅಭ್ಯರ್ಥಿ ಬಿಜೆಪಿ ಬಳಿ ಇಲ್ಲದಿದ್ದರೂ, ಗೆಲವಿನ ಅಂತರ ಕಡಿಮೆಗೊಳಿಸಲು ಸಾಧ್ಯವಾಗುವಂತಹ ಅಭ್ಯರ್ಥಿಯನ್ನು ಬಿಜೆಪಿ ತಲಾಷ್ ಮಾಡುತ್ತಿತ್ತು. ಹೇಗೂ ಲಿಂಗಾಯತ ಮತಗಳೂ ವರುಣಾದಲ್ಲಿ ಇರುವುದರಿಂದ ವಿಜಯೇಂದ್ರ ಹೆಸರು ಕೂಡಾ ಮುಂಚೂಣಿಗೆ ಬಂದಿತ್ತು. ದಿಲ್ಲಿ ವರಿಷ್ಠರು ಕೂಡಾ ಇದೇ ಲೆಕ್ಕಾಚಾರದಲ್ಲಿದ್ದರು.
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸಬೇಕು ಎಂಬ ಆಗ್ರಹವಿದೆ. ಆದರೆ, ಅಂತಿಮ ನಿರ್ಧಾರವನ್ನು ಯಡಿಯೂರಪ್ಪ ಮತ್ತು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ ಎಂದು ಸಿಎಂ ಬೊಮ್ಮಾಯಿ ಕೂಡಾ ಹೇಳಿದ್ದರು..
ಸ್ವತಃ ಮೈಸೂರಿಗೆ ಬಿಎಸ್ವೈ ಮತ್ತು ವಿಜಯೇಂದ್ರ ತೆರಳಿ ಸಾಧ್ಯತೆಗಳನ್ನು ಗಮನಿಸಿದ್ದು, ವಿಜಯೇಂದ್ರ ಬಹಳ ಅಂತರದಿಂದ ಸೋಲುವ ಸಾಧ್ಯತೆಯನ್ನು ಕಲೆ ಹಾಕಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರುಗಳೊಂದಿಗೆ ಚರ್ಚೆ ನಡೆಸಿ ವರುಣಾ ವಿಜಯೇಂದ್ರ ಪರ ಇಲ್ಲ ಎನ್ನುವುದರ ಬಗ್ಗೆ ಬಿಎಸ್ವೈ ಮನಗಂಡಿದ್ದಾರೆ.
ಅಲದೆ, ವರುಣಾದಲ್ಲಿ ತಮಗಿರುವ ಶಕ್ತಿಯ ಕುರಿತು ಅರಿವಿರುವ ಸಿದ್ದರಾಮಯ್ಯ ಅಭ್ಯರ್ಥಿ ಯಾರೇ ಆಗಲಿ ಡೋಂಟ್ ಕೇರ್ ಅಂದಿದ್ರು. ವರುಣಾದಲ್ಲಿ ಕುರುಬ ಮತ್ತು ದಲಿತ ಮತದಾರರು ನಿರ್ಣಾಯಕವಾಗಿರುವುದರಿಂದ ಸಿದ್ದರಾಮಯ್ಯ ಅವರಿಗೆ ವರುಣಾ ಸೇಫ್ ಆಗಿರಲಿದೆ ಎಂಬ ಲೆಕ್ಕಾಚಾರ ಹೇಗೂ ಇತ್ತು.
ಬಿಜೆಪಿಯಲ್ಲೇ ಬಿಎಸ್ವೈ ಹಾಗೂ ಅವರ ಕುಟುಂಬ ವಿರುದ್ಧ ಷಡ್ಯಂತ್ರ ನಡೀತಿರುವ ಹಿನ್ನೆಲೆಯಲ್ಲಿ ವರುಣಾದಲ್ಲಿ ವಿಜಯೇಂದ್ರ ʼಬಲಿ ಕಾ ಬಕ್ರʼ ಆಗಬಾರದೆಂಬ ಬಗ್ಗೆ ಬಿಎಸ್ವೈ ಗಂಭೀರ ಗಮನ ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದೊಳಗಿಂದ ತೀವ್ರ ಒತ್ತಡವಿದ್ದರೂ ಮೈಸೂರಿಗೆ ಖುದ್ದು ಹೋಗಿ ಪರಿಶೀಲಿಸಿ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಅಂತಿಮ ನಿರ್ಧಾರ ತಳೆದಿದ್ದಾರೆ.