ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಪೂರ್ಣಾವಧಿ ಕಾಲ ಮುಖ್ಯಮಂತ್ರಿ ಆಗಿದ್ದಿದ್ದರೆ ರಾಜ್ಯವು ಇನ್ನಷ್ಟು ಅಭಿವೃದ್ಧಿ ಕಾಣುತ್ತಿತ್ತು ಎಂದು ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರ ನುಡಿದಿದ್ದಾರೆ. ನಾಲ್ಕು ಬಾರಿ ಬಿಎಸ್ವೈ ಸಿಎಂ ಆದರೂ ಪೂರ್ಣಾವಧಿ ಆಡಳಿತ ನಡೆಸಲು ಸಾಧ್ಯವಾಗಲಿಲ್ಲವೆಂದು ಬಿವೈ ವಿಜಯೇಂದ್ರ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.
ದೂರದೃಷ್ಟಿಯಿರುವ ನಾಯಕರಾಗಿ ಬಿಎಸ್ವೈ, ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದರು. ಇಂದಿಗೂ ಯಡಿಯೂರಪ್ಪ ಜನಮಾನಸದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಅಧಿಕಾರಾವಧಿಯನ್ನು ಒಮ್ಮೆಯಾದರೂ ಐದು ವರ್ಷ ಪೂರ್ಣಗೊಳಿಸಿದ್ದಿದ್ದರೆ ಮತ್ತಷ್ಟು ಅಭಿವೃದ್ಧಿ ಕಾಣಬಹುದಿತ್ತು ಎಂದಿದ್ದಾರೆ.
ತಂದೆಯ ವಯೋಮಾನದ ಬಗ್ಗೆಯೂ ಪ್ರತಿಕ್ರಿಯಿಸಿದ ವಿಜಯೇಂದ್ರ, ಎಚ್.ಡಿ.ದೇವೇಗೌಡರನ್ನು ಬಿಟ್ಟರೆ ಎಂಬತ್ತು ವರ್ಷ ದಾಟಿದವರು ರಾಜಕಾರಣದಲ್ಲಿ ಸಕ್ರಿಯವಾಗಿರುವುದು ಅಪರೂಪ. ಆದರೆ 81 ವರ್ಷ ವಯಸಿನಲ್ಲೂ ಯಡಿಯೂರಪ್ಪ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅವರ ವಯಸಿಗೂ ಸಾಮಥ್ರ್ಯಕ್ಕೂ ಸಂಬಂಧವಿಲ್ಲವೆಂದು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.