ಮಂಡ್ಯ: ಚಲಿಸುತ್ತಿದ್ದ ಖಾಸಗಿ ಬಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ನಡು ರಸ್ತೆಯಲ್ಲೇ ಹೊತ್ತಿ ಉರಿದಂತಹ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ನಡೆದಿದೆ.
ಇಂದು ಬೆಳಗ್ಗಿನ ಜಾವ 5 ಗಂಟೆ ವೇಳೆಯಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಉಡುಪಿಯಿಂದ ಬೆಂಗಳೂರು ಕಡೆಗೆ ಈ ಬಸ್ ಚಲಿಸುತ್ತಿತ್ತು. ಬಸ್ನಲ್ಲಿ 25 ಪ್ರಯಾಣಿಕರಿದ್ದರು. ಕದಬಹಳ್ಳಿ ಬಳಿ ಇದ್ದಕ್ಕಿದ್ದಂತೆ ಬಸ್ನಲ್ಲಿ ಬೆಂಕಿ ಕಾಣಿಸಿದೆ.
ತಕ್ಷಣ ಬಸ್ ಚಾಲಕ ಬಸ್ನಲ್ಲಿ ಇದ್ದ 25 ಮಂದಿ ಪ್ರಯಾಣಿಕರನ್ನು ತಮ್ಮ ಲೆಗೇಜ್ ಸಮೇತ ಕೆಳಗೆ ಇಳಿಯುವಂತೆ ಹೇಳಿದ್ದಾರೆ. ತಕ್ಷಣ ಎಲ್ಲಾ ಪ್ರಯಾಣಿಕರು ಬಸ್ನಿಂದ ಕೆಳಗೆ ಇಳಿದಿದ್ದಾರೆ. ನಂತರ ನೋಡ ನೋಡುತ್ತಿದ್ದಂತೆ ಇಡೀ ಬಸ್ ಬೆಂಕಿಗಾಹುತಿಯಾಗಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ಗೆ ಬೆಂಕಿ ತಗುಲಿದ್ದಾದರೂ ಹೇಗೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.