ತುಮಕೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕೆಲಸ ನಿರ್ವಹಿಸಲು ತೆರಳುತ್ತಿದ್ದ ಸರ್ಕಾರಿ ಮಹಿಳಾ ಸಿಬ್ಬಂದಿಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ (Road Mishap) ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು (Tumkur) ಗ್ರಾಮಾಂತರದ ಗೂಳೂರು ಬಳಿ ನಡೆದಿದೆ.
ಗೂಳೂರು ಪಂಚಾಯಿತಿಯಲ್ಲಿ ಗ್ರಾಮ ಆಡಳಿತಾಧಿಕಾರಿ (VAO) ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾವನ (26) ಅಪಘಾತಕ್ಕೀಡಾದವರು. ಇಂದು ಶನಿವಾರ ಬೆಳಗ್ಗೆ ಎಂದಿನಂತೆ ಎಸ್ಐಆರ್ (SIR) ಚುನಾವಣಾ ಕರ್ತವ್ಯಕ್ಕಾಗಿ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಭಾವನ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಗೂಳೂರು ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ಹೆಚ್ಚಿದ ಒತ್ತಡವೇ ಕಾರಣ?
ಅಧಿಕಾರಿಗಳು ಎಸ್ಐಆರ್ (SIR) ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹೇರಿದ್ದ ವಿಪರೀತ ಒತ್ತಡದಿಂದ ಕಂಗೆಟ್ಟಿದ್ದ ಭಾವನಾ ತರಾತುರಿಯಲ್ಲಿ ಕಚೇರಿಗೆ ತೆರಳುತ್ತಿದ್ದರು. ನಿನ್ನೆ (ಶುಕ್ರವಾರ) ಸಂಜೆಯಷ್ಟೇ ಜಿಲ್ಲಾಧಿಕಾರಿಗಳು ಈ ಕುರಿತು ಪ್ರಮುಖ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಆಜ್ಞೆ (ಕಟ್ಟಾಜ್ಞೆ) ಹೊರಡಿಸಿದ್ದರು ಎನ್ನಲಾಗಿದೆ.
ಉನ್ನತಾಧಿಕಾರಿಗಳ ಈ ಆದೇಶದ ಬೆನ್ನಲ್ಲೇ, ಇಂದು ಬೆಳಗ್ಗೆ ಮುಂಜಾನೆಯೇ ಒತ್ತಡದ ನಡುವೆ ಎಸ್ಐಆರ್ ಕಾರ್ಯಕ್ಕೆಂದು ಹೊರಟಿದ್ದ ಭಾವನ ಅವರು ಅಪಘಾತಕ್ಕೆ ಈಡಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನಕ್ಕಾಗಿ ಶೋಧ ಮುಂದುವರಿಸಿದ್ದಾರೆ.