ಮಂಗಳೂರು: ಅಕ್ರಮ ಆಸ್ತಿ ಪತ್ತೆ ಆರೋಪ ಪ್ರಕರಣಕ್ಕೆ (Case) ಸಂಬಂಧಿಸಿ ಕಾರವಾರದ ಕಾಂಗ್ರೆಸ್ (Congress) ಶಾಸಕ ಸತೀಶ್ ಸೈಲ್ (Satish Sail) ಅವರನ್ನು ಇ.ಡಿ. (ED) ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 14 ರಂದು ಶಾಸಕರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಸಂದರ್ಭದಲ್ಲಿ ರೂ.1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕತ್, ಆಭರಣಗಳು ಸೇರಿ ಬ್ಯಾಂಕ್ ಖಾತೆಗಳಲ್ಲಿ ರೂ.14.13 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಕಾರವಾರ, ಮುಂಬೈ, ದೆಹಲಿ, ಗೋವಾದಲ್ಲಿ ಇ.ಡಿ. ಅಧಿಕಾರಿಗಳಿಂದ ರೇಡ್ ಮಾಡಲಾಗಿತ್ತು. ಅಕ್ರಮ ಅದಿರು ಪ್ರಕರಣಕ್ಕೆ ಸಂಬಂಧಿಸಿ ನಡೆದ ದಾಳಿ ವೇಳೆ ಅಕ್ರಮ ಆಸ್ತಿ ಪತ್ತೆ ಆರೋಪ ಹಿನ್ನೆಲೆಯಲ್ಲಿ ಸೈಲ್ ಅವರನ್ನು ಇಡಿ ಬಂಧಿಸಿದೆ.
ಈ ಹಿಂದಿನ ದಾಳಿ ವೇಳೆಯ ಇ.ಡಿ ಲೆಕ್ಕ
22 ಗಂಟೆಗಳ ಕಾಲ ಪರಿಶೀಲನೆ ನಡೆಸಿ ತೆರಳಿದ್ದರು. ಇದೀಗ ಇಡೀ ದಾಳಿ ಬಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯದಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾದ ಸತೀಶ್ ಕೃಷ್ಣ ಸೈಲ್ ಮತ್ತು ಇತರ ವ್ಯಕ್ತಿಗಳು/ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ, ಬೆಂಗಳೂರಿನ ಇಡಿ ಅಧಿಕಾರಿಗಳು ಆಗಸ್ಟ್ 13 ಮತ್ತು 14 ರಂದು ಕಾರವಾರ, ಗೋವಾ, ಮುಂಬೈ ಮತ್ತು ನವದೆಹಲಿಯ ಅನೇಕ ಸ್ಥಳಗಳಲ್ಲಿ PMLA ಅಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದರು.
ಶೋಧ ಕಾರ್ಯಾಚರಣೆಯ ವೇಳೆ, ವಿವಿಧ ದಾಖಲೆಗಳು, ಇ-ಮೇಲ್ಗಳು, ದಾಖಲೆಗಳು ಸೇರಿದಂತೆ, 1.68 ಕೋಟಿ ನಗದು, 6.75 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳಲ್ಲಿ 14.13 ಕೋಟಿ ಬ್ಯಾಲೆನ್ಸ್ನ್ನು ಫ್ರೀಜ್ ಮಾಡಲಾಗಿದೆ ಎಂದು ಇ.ಡಿ ತಿಳಿಸಿದೆ.
ಅಜ್ಞಾತ ಸ್ಥಳಕ್ಕೆ ತೆರಳಿದ್ದ ಶಾಸಕ!
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದಲ್ಲಿರುವ ಸತೀಶ್ ಸೈಲ್ ಮನೆ ಮೇಲೆ ಇ.ಡಿ ಅಧಿಕಾರಿಗಳು ಮಾಡಿದ್ದಾಗ ಬೆಳಗಿನ ಜಾವ 4 ರವರೆಗೂ ಮನೆಯಲ್ಲಿ ಪರಿಶೀಲನೆ ನಡೆಸಿ ತೆರಳಿದ್ದರು. ಇಡಿ ದಾಳಿ ಬೆನ್ನಲ್ಲೇ ಸತೀಶ್ ಸೈಲ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿತ್ತು.
ಸೈಲ್ ಮೇಲಿದ್ದ ಪ್ರಕರಣ ಏನು?
ಶಾಸಕ ಸತೀಶ್ ಸೈಲ್ ಮಾಲೀಕತ್ವದ ಕಂಪನಿ ವಿರುದ್ಧ 2013ರ ಸೆ.13 ರಂದು ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2009ರ ಆರಂಭದಿಂದ 2010ರ ಮೇ ತಿಂಗಳ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಕುರಿತು ತನಿಖೆ ಆರಂಭಿಸಲಾಗಿತ್ತು.
ಈ ಸಮಯದಲ್ಲೇ ಸಿಬಿಐ ದಾಖಲಿಸಿದ್ದ ಐದು ಪ್ರತ್ಯೇಕ ಎಫ್ಐಆರ್ಗಳ ಪೈಕಿ ಸತೀಶ್ ಸೈಲ್ ಮಾಲೀಕತ್ವ ಹೊಂದಿರುವ ‘ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಆರ್ಸಿ 16 ‘ಎ’ ಹೆಸರಿನಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್, ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ತಿಳಿಸಿತ್ತು.
2009ರಿಂದ 2010ರ ಮೇ ತಿಂಗಳವರೆಗೆ ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರು, 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.
ಇದನ್ನೂ ಓದಿ: ಬೇಲೆಕೇರಿ ಅದಿರು ಕಳ್ಳಸಾಗಾಟ ಕೇಸ್ : ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ