ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ಬಳ್ಳಾರಿಯಲ್ಲಿ (Bellary) ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರು ಜ.1ರಂದು ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ 25 ಆರೋಪಿಗಳಿಗೆ ನ್ಯಾಯಾಲಯವು (Court) ಜಾಮೀನು (Bail) ಮಂಜೂರು ಮಾಡಿ ಆದೇಶಿಸಿದೆ.
ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ನಿಮಿತ್ತ ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿಯ ಬೆಂಬಲಿಗರ ನಡುವೆ ಭಾರೀ ಸಂಘರ್ಷ ನಡೆದಿತ್ತು.
ಕಲ್ಲು ತೂರಾಟ, ಖಾರದಪುಡಿ ಎರೆಚಾಟದ ವೇಳೆ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ಡಿಯ ಖಾಸಗಿ ಗನ್ ಮ್ಯಾನ್ ದಾಂಧಲೆ ದಿನ ಫೈರಿಂಗ್ ಮಾಡಿದ್ದ. ಇದರ ಪರಿಣಾಮ ಕಾಂಗ್ರೆಸ್ನ ಕಾರ್ಯಕರ್ತ ರಾಜಶೇಖರ್ ಗುಂಡೇಟಿಗೆ ಮೃತಪಟ್ಟಿದ್ದ.
ತೀವ್ರ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿರುವ ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳ ಪೈಕಿ ಸದ್ಯ ಸತೀಶ್ ರೆಡ್ಡಿ ಗನ್ ಮ್ಯಾನ್ ಚರಣ್ ಸಿಂಗ್ ಅವನನ್ನು ಹೊರತುಪಡಿಸಿ ಉಳಿದ ಆರೋಪಿತರಿಗೆ 42ನೇ ವಿಶೇಷ ನ್ಯಾಯಾಲವು ಇಂದು ಜಾಮೀನು ಮಂಜೂರು ಮಾಡಿದೆ.
ಐಜಿಪಿಯಾಗಿ ಡಾ.ಹರ್ಷ, ಎಸ್ಪಿಯಾಗಿ ಸುಮನ್ ನೇಮಕ
ಬಳ್ಳಾರಿ ಗಲಭೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಎಸ್ಪಿ ಬಳಿಕ ಐಜಿಪಿ ವರ್ತಿಕಾರನ್ನು ಎತ್ತಂಗಡಿ ಮಾಡಲಾಗಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಜ.7ರಂದು ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಹರ್ಷ ನೇಮಕಗೊಂಡಿದ್ದಾರೆ.
ಡಾ.ಹರ್ಷ ವರ್ಗಾವಣೆ ಬಳಿಕ ಪೋಸ್ಟಿಂಗ್ ನಿರೀಕ್ಷೆಯಲ್ಲಿದ್ದರು. ಅವರನ್ನು ಬಳ್ಳಾರಿ ವಲಯದ ಐಜಿಪಿಯಾಗಿ ನೇಮಕ ಮಾಡಲಾಗಿದೆ. ಇನ್ನೊಂದೆಡೆ ನೂತನ ಎಸ್ಪಿಯಾಗಿ ಸುಮನ್ ಡಿ ಪನ್ನೇಕರ್ ನೇಮಕಗೊಂಡಿದ್ದಾರೆ.
ಈ ಹಿಂದೆ ಗುಪ್ತಚರ ಇಲಾಖೆ ಉಪ ಆಯುಕ್ತೆಯಾಗಿದ್ದ ಸುಮನ್, ಸದ್ಯ ಬಳ್ಳಾರಿಯ ನೂತನ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ:
ಬಳ್ಳಾರಿ ಬುಲೆಟ್ ಕೇಸ್ನಲ್ಲಿ ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸ್ಥಾನಕ್ಕೆ ಐಜಿಪಿಯಾಗಿ ಪಿ.ಎಸ್ ಹರ್ಷ ಅವರನ್ನ ನೇಮಕ ಮಾಡಲಾಗಿದೆ. ವರ್ತಿಕಾ ಕಟಿಯಾರ್ ಅವರನ್ನ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಳಿಸಸಲಾಗಿದೆ.
ಸಸ್ಪೆಂಡ್ ಆಗಿದ್ದ ಪವನ್ ನೆಜ್ಜೂರು:
ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಅವರನ್ನು ಕರ್ತವ್ಯಲೋಪ ಆರೋಪದಡಿ ಸಸ್ಪೆಂಡ್ ಆಗಿದ್ದರು.
ಇದನ್ನೂ ಓದಿ: ಬಳ್ಳಾರಿ ಗಲಭೆ ಪ್ರಕರಣ – ಸಿಬಿಐ ತನಿಖೆ ಅಗತ್ಯವಿಲ್ಲ ಎಂದ ಗೃಹ ಸಚಿವರು!