ಬೆಂಗಳೂರು : ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದ ಆರೋಪದಡಿ ಬಿಜೆಪಿಯ 18 ಶಾಸಕರನ್ನು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು 6 ತಿಂಗಳು ಅಮಾನತು ಮಾಡಿದ್ದ ಮಾ.21ರ ಪ್ರಕರಣ ಸಂಬಂಧ ವಿಪಕ್ಷ ನಾಯಕರು ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾಗಿದ್ದಾರೆ.
ಕಳೆದ ತಿಂಗಳು ಮುಕ್ತಾಯವಾದ ಬಜೆಟ್ ಅಧಿವೇಶನದ ಕೊನೆ ದಿನವೇ ಕಲಾಪದ ವೇಳೆ ಅನುಚಿತವಾಗಿ ವರ್ತನೆ ತೋರಿದ ಆರೋಪದಡಿ ವಿಧಾನಸಭೆಯಿಂದ ಬಿಜೆಪಿ ಶಾಸಕರನ್ನು ಅಮಾನತುಪಡಿಸಿರುವ ಆದೇಶವನ್ನು ವಿಧಾನಸಭಾಧ್ಯಕ್ಷರು ಹಿಂಪಡೆಯದಿದ್ದರೆ, ಕೋರ್ಟ್ನ ಮೊರೆ ಹೋಗಲು ಬಿಜೆಪಿ ಪಕ್ಷ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು ಅಮಾನತು ರದ್ದತಿಗೆ ಮನವಿ ಸಲ್ಲಿಸಲು ಏ.25ರಂದೇ ಸ್ಪೀಕರ್ ಅವರನ್ನ ಭೇಟಿ ಮಾಡಬೇಕಿತ್ತು. ಆದ್ರೆ ಆ ದಿನ ಗುಡ್ ಫ್ರೈಡೇ ಇದ್ದ ಕಾರಣ ರಜೆಯಿತ್ತು. ಈ ಹಿನ್ನೆಲೆಯಲ್ಲಿ ಆ ಸಭೆಯನ್ನು ಸೋಮವಾರಕ್ಕೆ (ಏ.21) ಮುಂದೂಡಲಾಗಿತ್ತು. ನಾಳೆ ನಡೆಯಲಿರುವ ಸಭೆಯ ತೀರ್ಮಾನದ ಬಳಿಕ ಬಿಜೆಪಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
ಬಿಜೆಪಿಯ ಮುಂದೆ.. ನ್ಯಾಯಾಲಯಕ್ಕೆ ಹೋಗುವುದು ಒಂದು ಆಯ್ಕೆ ಇದೆ. ಆದರೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ತಪ್ಪಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ನಾವು ಸಂಯಮವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದೇವೆ. ನಾಳೆ ಸಭಾಧ್ಯಕ್ಷರು ಅಮಾನತು ಆದೇಶ ರದ್ದು ಮಾಡುವ ಕುರಿತಾಗಿ ಸಕರಾತ್ಮದಿಂದ ಸ್ಪಂದಿಸದಿದ್ದಲ್ಲಿ. ನಾವು ಸ್ಪೀಕರ್ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದು ಪಕ್ಕಾ ಎಂದು ಬಿಜೆಪಿಯ ನಾಯಕರ ಮೂಲಗಳಿಂದ ತಿಳಿದುಬಂದಿದೆ.
ಹಿಂದೊಮ್ಮೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹನ್ನೆರಡು ಶಾಸಕರ ಅಮಾನತು ರದ್ದುಗೊಳಿಸಿ ಅಲ್ಲಿನ ಸ್ಪೀಕರ್ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗಿತ್ತು. ವಾದ-ವಿವಾದವನ್ನು ಆಲಿಸಿದ್ದ ಬಾಂಬೆ ಹೈಕೋರ್ಟ್ 2021ರ ತೀರ್ಪನ್ನು ಉಲ್ಲೇಖಿಸಿ ಅಮಾನತು ಆದೇಶ ರದ್ದುಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.