ಬೆಳಗಾವಿ : ನಾಳೆ (ಜ.21) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಸಮಾವೇಶದ (ಗಾಂಧಿ ಭಾರತ ಸಮಾವೇಶ) ನಿಮಿತ್ತ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಸಮಾವೇಶ ನಿಮಿತ್ತ ಬೆಳಗಾವಿ ನಗರ, ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ರಜೆ ಇರಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಅಂಗನವಾಡಿಗಳಿಗೆ ರಜೆ ನೀಡಲಾಗಿದೆ. ಬೆಳಗಾವಿ ಗ್ರಾಮಾಂತರ ಹಾಗೂ ನಗರದ ಎಲ್ಲಾ ಶಾಲೆಗಳೂ ಸೇರಿದಂತೆ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಅನ್ವಯಿಸಲಿದೆ ಎಂದು ಡಿಸಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಾಮಾವೇಶ ನಿಮಿತ್ತ ಈಗಾಗಲೇ ಅಂತಿಮ ಹಂತದ ತಯಾರಿಗಳು ನಡೆಯುತ್ತಿದ್ದು, ಈ ಸಂಬಂಧ ಇಂದು ಬೆಳಗಾವಿಯ ಸರ್ಕಿಟ್ ಹೌಸ್ನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದರು.
ನಾಳಿನ ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆಯೂ ಅನಾವರಣಗೊಳ್ಳಲಿದ್ದು, ಬಳಿಕ ಸಮಾವೇಶ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಇನ್ನಿತರ ವರಿಷ್ಠ ನಾಯಕರು ಪಾಲ್ಗೊಳ್ಳಲಿದ್ದಾರೆ.