ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರನ್ನು ಗೆಲ್ಲಲು ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಬಿಗ್ ಟಾಸ್ಕ್ ನೀಡಿದ್ದಾರೆ. ಬೆಂಗಳೂರು ನಗರದಲ್ಲಿಯೇ 28 ವಿಧಾನಸಭಾ ಕ್ಷೇತ್ರಗಳಿದ್ದು, ಗ್ರಾಮಾಂತರ ಸೇರಿ 32 ಕ್ಷೇತ್ರಗಳು ಇವೆ. ಬೆಂಗಳೂರನ್ನು ಗೆದ್ದರೆ, ಇನ್ನೇನು ಬರಲಿರುವ ಬಿಬಿಎಂಪಿ ಚುನಾವಣೆಯನ್ನೂ ಸುಲಭದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಈ ಟಾಸ್ಕ್ ನೀಡಲಾಗಿದೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗಿದ್ದು ಟಿಕೆಟ್ ಹಂಚಿಕೆ ಕುರಿತು ಚರ್ಚಿಸಲಾಗಿದೆ. ಇದೇ ವೇಳೆ ಬೆಂಗಳೂರು ಹಾಗೂ ಹಳೆ ಮೈಸೂರು ಭಾಗದ ಕಡೆಗೆ ವಿಶೇಷ ಗಮನವಹಿಸಲು ಶಾ ಸೂಚಿಸಿದ್ದಾರೆ. ಕರಾವಳಿ ಹೇಗೂ ಬಿಜೆಪಿ ಭದ್ರಕೋಟೆ ಆಗಿರೋದ್ರಿಂದ ಸದ್ಯಕ್ಕೆ ಕರಾವಳಿಯ ಕುರಿತು ಬಿಜೆಪಿ ಪಾಳೆಯದಲ್ಲಿ ಹೆಚ್ಚಿನ ಆತಂಕಗಳೇನೂ ಇಲ್ಲ.
ಅಭ್ಯರ್ಥಿ ಯಾರಾಗಬೇಕು ಎನ್ನುವುದು ನಮ್ಮ ತೀರ್ಮಾನ, ಪಕ್ಷದ ಸೂಚನೆ ಪಾಲಿಸಿ, ಅಭ್ಯರ್ಥಿಗಳ ಗೆಲ್ಲಿಸಬೇಕು, ರಾಜ್ಯದಲ್ಲಿ ಮೋದಿ ಅಲೆ ಚೆನ್ನಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಕೆಲಸ ಮಾಡಿದರೆ ಗೆಲ್ಲಬಹುದು ಎಂದು ಅಮಿತ್ ಶಾ ಹುರಿದುಂಬಿಸಿದ್ದಾರೆ ಎನ್ನಲಾಗಿದೆ.
ಈ ಚುನಾವಣೆಯಿಂದಲೇ ಹೊಂದಾಣಿಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಬೆಂಗಳೂರಿನಲ್ಲಿ 2018ರ ಚುನಾವಣೆಯಲ್ಲಿ ಕೇವಲ 11 ಕ್ಷೇತ್ರ ಮಾತ್ರ ಗೆದ್ದಿದ್ದೇವೆ. ಈ ಚುನಾವಣೆಯಲ್ಲಿ 20+ ಕ್ಷೇತ್ರಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಠಿಣ ಕೆಲಸ ಮಾಡಿ ಎಂಬ ಖಡಕ್ ಸೂಚನೆ ಬಂದಿದೆ.
ಪಕ್ಷದ ಸಂಘಟನೆ ತುಸು ದುರ್ಬಲವಾಗಿರುವ ಹಳೆ ಮೈಸೂರು ಭಾಗ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಸಹ ನೀಡಲಾಗಿದೆ. ಕೋರ್ ಕಮಿಟಿಯಲ್ಲಿ ಚರ್ಚೆಯಾಗಿರುವ ಪ್ರಕಾರ ಚುನಾವಣೆ ಘೋಷಣೆಯಾದ ಬಳಿಕವೇ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆ ಇದೆ.