ಚೆನ್ನೈ: ತಮಿಳುನಾಡು (Tamilnadu) ರಾಜಕೀಯದಲ್ಲಿ (Politics) ದೊಡ್ಡ ಮಟ್ಟದ ಬೆಳವಣಿಗೆ ನಡೆಯುತ್ತಿವೆ. ಇದೇ ವರ್ಷ ತಮಿಳುನಾಡು ಚುನಾವಣೆ (Election) ಎದುರಿಸಲಿದ್ದು, ಇಂಡಿ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ತಮಿಳು ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್. ಈ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಸೆನ್ಸಾರ್ ಮಂಡಳಿಯಿಂದಾಗಿ ಸಿನಿಮಾ ಬಿಡುಗಡೆಗೆ ಅಡೆತಡೆಗಳು ಎದುರಾಗಿವೆ. ಸದ್ಯ ಈಗ ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಟಾಪಟಿ ಶುರುವಾಗಿದೆ.
ನಟ ವಿಜಯ್ ಹೊಸ ಚಿತ್ರ ಜನ ನಾಯಗನ್ ಬಿಡುಗಡೆಗೆ ತಡೆಯೊಡ್ಡುತ್ತಿರುವ ಸಮಯದಲ್ಲಿ ರಾಹುಲ್ ಗಾಂಧಿ ಒಂದು ಪೋಸ್ಟ್ ಹಾಕಿದ್ದಾರೆ. ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ವಿಜಯ್ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ, ಆದರೆ ಡಿಎಂಕೆ ಇಡೀ ವಿಷಯದ ಬಗ್ಗೆ ಮೌನವನ್ನು ಕಾಯ್ದುಕೊಂಡಿದೆ.
ನಿನ್ನೆ ರಾಹುಲ್ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ರು. ಸೇಂಟ್ ಥಾಮಸ್ ಶಾಲೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದಾಗ ರಾಹುಲ್ ಗಾಂಧಿ ವಿಜಯ್ಗೆ ಬೆಂಬಲ ನೀಡಿದ್ದು ವಿಶೇಷ.
ಇದನ್ನೂ ಓದಿ: ರಾಷ್ಟ್ರೀಯ ಬಿಜೆಪಿಗೆ ಭರ್ಜರಿ ಸರ್ಜರಿ : 45 ವರ್ಷದ ನಾಯಕನಿಗೆ ಪಟ್ಟ ಕಟ್ಟುತ್ತಾರಾ ಮೋದಿ..?
ರಾಹುಲ್ ಗಾಂಧಿಯ ವಾದವೇನು?: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜನನಾಯಗನ್ ಚಿತ್ರವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿರುವುದು ತಮಿಳು ಸಂಸ್ಕೃತಿಯ ಮೇಲಿನ ದಾಳಿಯಾಗಿದೆ. ಪ್ರಧಾನಿ ಮೋದಿಯವರೇ, ತಮಿಳು ಜನರ ಧ್ವನಿಯನ್ನು ಹತ್ತಿಕ್ಕಲು ಎಂದಿಗೂ ಸಾಧ್ಯವಾಗೋದಿಲ್ಲ. ಈ ವಿಚಾರದಲ್ಲಿ ಯಶಸ್ವಿಯಾಗೋಲ್ಲ ಎಂದು ಎಕ್ಸ್ನಲ್ಲಿ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು.
ಫೋನ್ ಕರೆಗಳಿಂದ ಹೆಚ್ಚಿದ ದೂರ: ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮಾತ್ರವಲ್ಲದೆ, ರಾಹುಲ್ ಗಾಂಧಿಯವರ ಫೋನ್ ಕರೆಯೂ ಡಿಎಂಕೆ-ಕಾಂಗ್ರೆಸ್ ಸಂಬಂಧವನ್ನು ಹದಗೆಡಿಸಿದೆ. ವಿಜಯ್ ಒಂದು ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಹಲವಾರು ಜನರು ಸಾವನ್ನಪ್ಪಿದ ನಂತರ ಡಿಎಂಕೆ ವಿಜಯ್ರನ್ನು ಟೀಕಿಸಿತ್ತು. ಆದರೂ, ರಾಹುಲ್ ಗಾಂಧಿ ನಂತರ ವಿಜಯ್ಗೆ ಕರೆ ಮಾಡಿ ಬೆಂಬಲ ನೀಡಿದ್ರು. ಡಿಎಂಕೆ ಈ ನಡೆಯನ್ನು ಪ್ರಶ್ನಿಸಿತ್ತು. ಆಗಿನಿಂದ ಎರಡೂ ಪಕ್ಷಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಜೆಪಿ ವಕ್ತಾರ ವಾಗ್ದಾಳಿ: ‘ರಾಹುಲ್ ಗಾಂಧಿಗೆ ನಾಚಿಕೆ ಇಲ್ಲದೆ ಸುಳ್ಳು ಹೇಳೋದು ಅಭ್ಯಾಸವಾಗಿ ಹೋಗಿದೆ. ಸುಳ್ಳು ಸುದ್ದಿ ಹರಡೋದು ಇವರ ಕಸುಬು. ಇವರದ್ದೇ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪವಿತ್ರವಾದ ಜಲ್ಲಿಕಟ್ಟನ್ನು ಅನಾಗರಿಕ ಎಂದು ಕರೆಯುವ ಮೂಲಕ ತಮಿಳು ಜನರ ಭಾವನೆಗಳು, ಸಂಸ್ಕೃತಿ ಮತ್ತು ಹೆಮ್ಮೆಯನ್ನು ಅವಮಾನಿಸಿದ್ದವು. ಪೊಂಗಲ್ ಹಬ್ಬದ ಜೊತೆಗೆ ಆಚರಿಸಲಾಗುತ್ತಿದ್ದ ಜಲ್ಲಿಕಟ್ಟನ್ನು ಯುಪಿಎ ಸರ್ಕಾರವು ಅಧಿಸೂಚನೆ ಹೊರಡಿಸುವ ಮೂಲಕ ತೀವ್ರವಾಗಿ ವಿರೋಧಿಸಿತ್ತು. ಇದು ಮುಂದೆ ಜಲ್ಲಿಕಟ್ಟು ನಿಷೇಧಕ್ಕೆ ಕಾರಣವಾಯಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ನಿರಂತರ ಬೆಂಬಲದಿಂದ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸಲಾಯಿತು’ ಎಂದು ಬಿಜೆಪಿ ಟೀಕಿಸಿದೆ.