Thursday, July 16, 2026
Homeಟಾಪ್ ನ್ಯೂಸ್BIG NEWS: ಡಿಜಿಟಲ್ ಗಾಸಿಪ್, ಯೂಟ್ಯೂಬ್ ಲಿಂಕ್ ಇಟ್ಟುಕೊಂಡು ಪಿಐಎಲ್ ಸಲ್ಲಿಸುವಂತಿಲ್ಲ!

BIG NEWS: ಡಿಜಿಟಲ್ ಗಾಸಿಪ್, ಯೂಟ್ಯೂಬ್ ಲಿಂಕ್ ಇಟ್ಟುಕೊಂಡು ಪಿಐಎಲ್ ಸಲ್ಲಿಸುವಂತಿಲ್ಲ!

ಚೆನ್ನೈ: ಡಿಜಿಟಲ್ ಲೋಕದ ಹರಟೆಗಳು (ಡಿಜಿಟಲ್ ಗಾಸಿಪ್), ಯೂಟ್ಯೂಬ್ ಲಿಂಕ್‌ಗಳು, ಪತ್ರಿಕಾ ತುಣುಕುಗಳು ಹಾಗೂ ಯಾವುದೇ ಸೂಕ್ತ ಆಧಾರವಿಲ್ಲದ (Big News)  ಆರೋಪಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಸಲ್ಲಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅರ್ಜಿದಾರರು ಸ್ವತಂತ್ರವಾಗಿ ಯಾವುದೇ ಸಂಶೋಧನೆ ಅಥವಾ ಸತ್ಯಾಸತ್ಯತೆಯ ಪರಿಶೀಲನೆ ನಡೆಸದೆ ಕೇವಲ ಊಹಾಪೋಹಗಳ ಆಧಾರದ ಮೇಲೆ ಸಲ್ಲಿಸುವ ಇಂತಹ ಅರ್ಜಿಗಳನ್ನು ಆರಂಭದಲ್ಲೇ ಹೊಸಕಿ ಹಾಕಬೇಕು ಎಂದು ನ್ಯಾಯಾಲಯ ಹೇಳಿದೆ.

ತಿರುವಳ್ಳೂರಿನ ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆಗೆ ನೀಡಿರುವ ಸ್ವಾಯತ್ತ ಸ್ಥಾನಮಾನ ಮತ್ತು ಮಾನ್ಯತೆಗಳ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಡಿ. ರಾಧಾಕೃಷ್ಣನ್ ಎಂಬುವವರು ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸುವಾಗ ಮದ್ರಾಸ್ ಹೈಕೋರ್ಟ್ ಈ ಮಹತ್ತರ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.

ಯೂಟ್ಯೂಬ್ ಲಿಂಕ್, ಪತ್ರಿಕಾ ವರದಿ ಸಂಶೋಧನೆಗೆ ಸಮನಲ್ಲ”
ಅರ್ಜಿದಾರರು ಕಾಲೇಜಿನ ವಿರುದ್ಧದ ಅಕ್ರಮಗಳ ಆರೋಪಕ್ಕೆ ಪೂರಕವಾಗಿ ಕೇವಲ ಪತ್ರಿಕಾ ವರದಿಗಳು, ಯೂಟ್ಯೂಬ್ ದೃಶ್ಯಾವಳಿಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತ ದಳ (DVAC) ದಾಖಲಿಸಿರುವ ಎಫ್‌ಐಆರ್ ಪ್ರತಿಯನ್ನು ಮಾತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕೇವಲ ಡಿವಿಎಸಿ ತನಿಖೆ ಅಥವಾ ಡಿಜಿಟಲ್ ಗಾಸಿಪ್‌ಗಳನ್ನು ನೆಚ್ಚಿಕೊಳ್ಳುವುದು ಪಿಐಎಲ್ ಸಲ್ಲಿಕೆಗೆ ಕಾನೂನಿನಲ್ಲಿ ನಿಗದಿಪಡಿಸಲಾಗಿರುವ ಕಟ್ಟುನಿಟ್ಟಾದ ಸಂಶೋಧನೆಯ (Strict Research) ಮಾನದಂಡಕ್ಕೆ ಸಮನಾಗುವುದಿಲ್ಲ. ಅರ್ಜಿದಾರರು ಯಾವುದೇ ಸ್ವತಂತ್ರ ಸಂಶೋಧನೆ ನಡೆಸದೆ ಕೇವಲ ಪತ್ರಿಕಾ ತುಣುಕುಗಳು ಮತ್ತು ಯೂಟ್ಯೂಬ್ ಲಿಂಕ್‌ಗಳನ್ನು ಒಟ್ಟಿಗೆ ಜೋಡಿಸಿ ತಮಗೆ ಬೇಕಾದ ಕಥೆಯನ್ನು ಹೆಣೆದಿದ್ದಾರೆ. ಯಾವುದೇ ಮೂಲಭೂತ ಸತ್ಯಾಂಶಗಳನ್ನು ಪರಿಶೀಲಿಸದೆ ಪಿಐಎಲ್ ದಾಖಲಿಸುವುದು ನ್ಯಾಯಾಲಯದಲ್ಲಿ ಬಾಕಿ ಇರುವ ಕಾನೂನು ಪ್ರಕ್ರಿಯೆಯನ್ನು ಸನ್ಸೇಷನಲೈಸ್ (ಸುದ್ದಿ ಮಾಡುವ) ಮಾಡುವ ಯತ್ನವಷ್ಟೇ ಆಗಿದೆ, ಎಂದು ತರಾಟೆಗೆ ತೆಗೆದುಕೊಂಡಿತು.

ಒಂದಕ್ಕೊಂದು ಸಂಬಂಧವಿಲ್ಲದ ಬೇಡಿಕೆಗಳಿಗೆ ಕೋರ್ಟ್ ಅಸಮ್ಮತಿ
ಕೋರ್ಟ್ ಮೆಟ್ಟಿಲೇರುವ ಮುನ್ನ ಅರ್ಜಿದಾರರ ನಿಲುವಿನಲ್ಲಿದ್ದ ಗೊಂದಲಗಳನ್ನು ನ್ಯಾಯಪೀಠ ಎತ್ತಿ ತೋರಿಸಿತು. ಅರ್ಜಿದಾರರು ನ್ಯಾಯಾಲಯಕ್ಕೆ ಬರುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನೀಡಿದ್ದ ಅಧಿಕೃತ ಮನವಿಯಲ್ಲಿ ಕಾಲೇಜಿನ ಸ್ವಾಯತ್ತತೆಯನ್ನು ರದ್ದುಗೊಳಿಸುವಂತೆ ಕೋರಿದ್ದರು. ಆದರೆ, ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತನಿಖಾ ಸಮಿತಿ ರಚಿಸುವಂತೆ ಕೇಳಿದ್ದಾರೆ.
ಹೀಗೆ ತಾವೇ ನೀಡುವ ದೂರು ಹಾಗೂ ಬೇಡಿಕೆಗಳಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ ವಿಭಿನ್ನ ನಿಲುವುಗಳನ್ನು ಇಡುವುದನ್ನು ಕಾನೂನಾತ್ಮಕವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಮದ್ರಾಸ್ ಹೈಕೋರ್ಟ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್, ರಾಬ್ರಿ ದೇವಿಗೆ ಮತ್ತೆ ‘Z’ ಕೆಟಗರಿ ಭದ್ರತೆ ನೀಡಿದ ಸರ್ಕಾರ

ಹೆಚ್ಚಿನ ಸುದ್ದಿ

Change Language »
error: Content is protected !!