ಬೆಂಗಳೂರು : ಜೆಡಿಎಸ್ ಪಕ್ಷದಿಂದ ಹಾಸನದಲ್ಲಿ ಕಣಕ್ಕಿಳಿಸುವ ಅಭ್ಯರ್ಥಿಯ ಕುರಿತು ಭಾನುವಾರ ತಡರಾತ್ರಿ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಸಭೆ ನಡೆದಿದೆ. ಆದರೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂಬ ತೀರ್ಮಾನವನ್ನು ಹೊರತು ಪಡಿಸಿದರೆ ಬೇರಾವುದೇ ಮುಖ್ಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಒಂದು ಹಂತದಲ್ಲಿ ದೇವೇಗೌಡರ ನಿರ್ಣಯದಿಂದ ತೀವ್ರ ಅಸಮಾಧಾನಗೊಂಡ ರೇವಣ್ಣ ದಂಪತಿ, ಸಭೆಯಿಂದೆದ್ದು ಹೊರನಡೆದಿದ್ದಾರೆನ್ನಲಾಗಿದೆ.
ಈ ಅಸ್ಪಷ್ಟತೆಯ ನಡುವೆಯೇ ಕುಮಾರಸ್ವಾಮಿಯವರು ಘೋಷಿಸಿದಂತೆ ಸೋಮವಾರ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ನಿರೀಕ್ಷಿಸಲಾಗಿದ್ದು, ಈ ಪಟ್ಟಿಯಲ್ಲಿ ಹಾಸನ ಕ್ಷೇತ್ರ ಯಾರ ಬುಟ್ಟಿಗೆ ಬೀಳುವುದೋ ಕಾದು ನೋಡಬೇಕಿದೆ. ಹಾಸನದಲ್ಲಿ ಕುಮಾರಸ್ವಾಮಿ ಒಲವು ಸ್ವರೂಪ್ ಪರ ಇದ್ದರೆ, ಭವಾನಿ ರೇವಣ್ಣ ಸ್ವತಃ ತಾವೇ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಭಿನ್ನಾಭಿಪ್ರಾಯ ದೇವೇಗೌಡರ ಸಮ್ಮುಖದಲ್ಲಿಯೂ ಸಹ ತೀರ್ಮಾನವಾಗಿಲ್ಲ.
ಕೇವಲ ಎರಡು ದಿನಗಳ ಹಿಂದಷ್ಟೇ ಹಾಸನದ ವಿಷದಯಲ್ಲಿ ಪ್ರತಿಕ್ರಿಯಿಸಿದ್ದ ಹೆಚ್ಡಿಕೆ ಕುಟುಂಬಕ್ಕಿಂತ ಪಕ್ಷದ ಕಾರ್ಯಕರ್ತರು ಮುಖ್ಯ ಎಂದು ನುಡಿದಿದ್ದರು.