ನೆಲಮಂಗಲ: ಮಗಳ ಮದುವೆಯನ್ನು (Wedding) ಅದ್ಧೂರಿಯಾಗಿ ಮಾಡಬೇಕೆಂಬ ಕನಸು ಕಂಡಿದ್ದ ಕುಟುಂಬವೊಂದಕ್ಕೆ (Family) ಕಿಡಿಗೇಡಿಗಳು ಬಿಗ್ ಶಾಕ್ (Big Shock) ನೀಡಿದ್ದಾರೆ. ವಿವಾಹದ ಆಮಂತ್ರಣ ಪತ್ರಿಕೆ (Invitation) ಹಂಚಲು ಹೊರಗಡೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (Bridal Jewelery) ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ನೆಲಮಂಗಲದ ದಾಸನಪುರ ವ್ಯಾಪ್ತಿಯ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ.
ಮೂಲತಃ ತಮಿಳುನಾಡಿನವರಾದ ಶಿವ ಮತ್ತು ಲೋಕೇಶ್ವರಿ ದಂಪತಿ ಕಳೆದ ಹಲವು ವರ್ಷಗಳಿಂದ ನೆಲಮಂಗಲದಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತಮ್ಮ ಮೂರನೇ ಮಗಳು ಶಂಕರಿಯ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ, ಕಷ್ಟಪಟ್ಟು ದುಡಿದ ಹಣ ಹಾಗೂ ಸಾಲದ ನೆರವಿನಿಂದ ಮಗಳಿಗಾಗಿ ಸುಮಾರು 60 ಗ್ರಾಂಗಳಿಗೂ ಅಧಿಕ ತೂಕದ ನೆಕ್ಲೆಸ್, ಕಿವಿ ಓಲೆ ಸೇರಿದಂತೆ ವಿವಿಧ ಬಂಗಾರದ ಆಭರಣಗಳನ್ನು ಖರೀದಿಸಿ ತಂದಿದ್ದರು.
ಮೇ 5 ರಂದು ದಂಪತಿಗಳು ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಲು ತಮಿಳುನಾಡಿನಲ್ಲಿರುವ ವರನ ಮನೆಗೆ ತೆರಳಿದ್ದರು. ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ, ವಧುವಿಗಾಗಿ ತಂದಿದ್ದ ಎಲ್ಲಾ ಆಭರಣಗಳನ್ನು ದೋಚಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆತಂಕ ಮನೆಮಾಡಿದೆ. ಮಗಳ ಮದುವೆ ಹೇಗೆ ಮಾಡುವುದೆಂಬ ಚಿಂತೆಯಲ್ಲಿರುವ ಕುಟುಂಬಸ್ಥರು, ಕದ್ದ ಮಾಲನ್ನು ಶೀಘ್ರವಾಗಿ ಪತ್ತೆಹಚ್ಚಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕಾಂಗ್ರೆಸ್ ಮುಖಂಡನ ಪುತ್ರರಿಂದ ಗೂಂಡಾಗಿರಿ, ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ
ಕೊಡಗು: ಮಡಿಕೇರಿ ಸಮೀಪದ ನಾಪೋಕ್ಲುವಿನಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಳೆಯ ದ್ವೇಷ ವಿಕೋಪಕ್ಕೆ ತಿರುಗಿದ್ದು, ಆಟೋ ಚಾಲಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರ ಪುತ್ರರು ಈ ಕೃತ್ಯವೆಸಗಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ಚಾಲಕ ಝಕರಿ ಎಂಬುವವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅತ್ಯಂತ ಕ್ರೂರವಾಗಿ ಅವರ ಮೇಲೆ ದಾಳಿ ಮಾಡಿದ್ದಾರೆ.
ಈ ವೇಳೆ ಮಾರಕ ತೀವ್ರತೆಗೆ ಚಾಲಕ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.ಮೊದಲು ಚಾಲಕನ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಆತನ ಕಣ್ಣು ಕಾಣದಂತೆ ಮಾಡಿದ್ದಾರೆ. ನಂತರ ಆತನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಚಾಲಕ ಪ್ರಾಣ ಬಿಟ್ಟಿದ್ದಾನೆ ಎಂದು ಭಾವಿಸಿದ ಆರೋಪಿಗಳು, ಆತನನ್ನು ಚರಂಡಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಸ್ತುತ ಗಾಯಾಳು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಭೀಕರ ಕೃತ್ಯವೆಸಗಿದ ಆರೋಪಿಗಳು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರ ಪುತ್ರರಾದ ನಾಫಿ ಮತ್ತು ಸಿದ್ದಿಕ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಈ ಹಿಂದೆಯೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು. ಈ ಹಿಂದೆ ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಇವರ ಮೇಲಿತ್ತು.
ಇದೀಗ ಮತ್ತೆ ರಾಜಕೀಯ ಪ್ರಭಾವದ ಹಿನ್ನೆಲೆ ಇರುವ ವ್ಯಕ್ತಿಗಳ ಮಕ್ಕಳೇ ಕಾನೂನನ್ನು ಕೈಗೆತ್ತಿಕೊಂಡು ಈ ದೌರ್ಜನ್ಯ ನಡೆಸಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮಗಳ ಮೇಲೆ ದೌರ್ಜನ್ಯ ಎಸಗಿದ್ದ ಪೋಕ್ಸೊ ಆರೋಪಿಯ ಬರ್ಬರ ಕೊ*ಲೆ!