ಬೆಂಗಳೂರು : ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ನಗರದ (bengaluru) ಪರಪ್ಪನ ಅಗ್ರಹಾರ (Parappana Agrahara)ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ. ಘಟನೆಯು ಮಾರ್ಚ್ 9ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಂದು ಕರ್ತವ್ಯದಲ್ಲಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳಉಡುಪಿನಲ್ಲಿ ಹಣ ಮತ್ತು ಕಪ್ಪು ಟೇಪ್ನಿಂದ ಸುತ್ತಿದ ಪೊಟ್ಟಣ ಪತ್ತೆಯಾಯಿತು. ಅನುಮಾನಗೊಂಡ ಸಿಬ್ಬಂದಿ ಪೊಟ್ಟಣವನ್ನು ತೆರಳಿ ಪರಿಶೀಲಿಸಿದಾಗ ಅದರೊಳಗೆ ಗಾಂಜಾ ಇರುವುದನ್ನು ಕಂಡುಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ, ಕೆಎಸ್ಐಎಸ್ಎಫ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಗಾಂಜಾ ಜೈಲಿನೊಳಗೆ ಸಾಗಿಸಲು ಪ್ರಕಾಶ್ ಗಾವಡೆ ಯತ್ನಿಸಿದ್ದಾನೆ ಎಂಬುದು ತಿಳಿದುಬಂದಿದೆ. ಬಳಿಕ ಜೈಲು ಅಧಿಕಾರಿಗಳು ಅವನನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬನು ಪ್ರಕಾಶ್ಗೆ ಕರೆ ಮಾಡಿ ಗಾಂಜಾ ತಂದುಕೊಡಲು ಸೂಚಿಸಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಹೊರಗಿನಿಂದ ಗಾಂಜಾ ತಂದು ಜೈಲಿನೊಳಗೆ ತಲುಪಿಸಿದರೆ 10 ಸಾವಿರ ರೂ. ನೀಡುವುದಾಗಿ ಆ ಕೈದಿ ಹೇಳಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಖಡಕ್ ರೂಲ್ಸ್ ಮಾಡಿದ ಅಲೋಕ್ ಕುಮಾರ್
ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, ರಾಜ್ಯದ ವಿವಿಧ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವರ್ಷಾನುಗಟ್ಟಲೆ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪ್ಲಾನ್ ಮಾಡಿದ್ದಾರೆ. ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಪರಪ್ಪನ ಅಗ್ರಹಾರಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನೇಮಕಗೊಂಡಿರುವ ಅಲೋಕ್ ಕುಮಾರ್, ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳ ಚಳಿ ಬಿಡಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹಲವು ರಾಜಾತಿಥ್ಯ ವೀಡಿಯೋಗಳು ವೈರಲ್ ಆಗಿದೆ. ಯಾವಾಗ ಆಯ್ತು ಅನ್ನೋದ್ರ ಜೊತೆಗೆ ವೈರಲ್ ಮಾಡಿದ್ದು ಯಾರು ಅಂತ ಗೊತ್ತಾಗಬೇಕು ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದರು.
ಈ ವರ್ಷದಲ್ಲಿ 67 ಮೊಬೈಲ್ ಸಿಕ್ಕಿದೆ, 48 ಸಿಮ್ ಹಾಗೂ ಚಾಕುಗಳು ಸಿಕ್ಕಿದೆ ಎಂದು ಪರಪ್ಪನ ಅಗ್ರಹಾರ ಜೈಲಿ ಅಧಿಕಾರಿಗಳು ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಉತ್ತರಿಸಿದ್ದರು. ಇದರ ಬಗ್ಗೆ ತನಿಖೆ ಆಗ್ತಾ ಇದೆ ಅಂತ ಸಭೆಯಲ್ಲಿ ಹೇಳಿದ್ದರು. ಇಷ್ಟು ಭದ್ರತೆ ಇದ್ದು, ಹೇಗೆ ಮೊಬೈಲ್ ಜೈಲು ಒಳಗಡೆ ಹೋಗ್ತಾ ಇದೆ? ಭದ್ರತೆ ಇದ್ದು ಮೊಬೈಲ್ ಹೋಗ್ತಾ ಇದೆ ಅಂದ್ರೆ ನಮ್ಮವರೇ ಶಾಮೀಲು ಅಂತ ತಾನೆ?, ಅವರು ಯಾರು ಅನ್ನೋ ಬಗ್ಗೆ ತನಿಖೆ ಮಾಡಿ ವರದಿ ಕೊಡಿ ಅಂತ ಅಲೋಕ್ ಕುಮಾರ್ ವಾರ್ನ್ ಮಾಡಿದ್ದರು.