ಬೆಂಗಳೂರು: ಅತ್ತಿಬೆಲೆ ಅಗ್ನಿ ದುರಂತದಲ್ಲಿ ಗಾಯಗೊಂಡಿರುವವರಿಗೆ ಸರ್ಕಾರ ಸ್ವತಃ ಉಚಿತ ಚಿಕಿತ್ಸೆ ನೀಡಬೇಕೆಂದು ಸರ್ಕಾರ ಆದೇಶವಿದ್ದರೂ ಸೇಂಟ್ ಜಾನ್ಸ್ ಆಸ್ಪತ್ರೆ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಡಿಸಿ ದಯಾನಂದ ದೂರು ಆಧರಿಸಿ FIR ದಾಖಲು ಮಾಡಲಾಗಿದೆ. ದುರಂತದಲ್ಲಿ ಗಾಯಗೊಂಡಿದ್ದ ವೆಂಕಟೇಶ್ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಆತನ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸುವುದಾಗಿ ಸೂಚನೆ ನೀಡಿದರೂ ಸಹ ಮೊಬೈಲ್ ನಂಬರ್ ಕೊಟ್ಟು ಹಣ ಪಾವತಿಗೆ ಸೂಚಿಸಿದ್ದ ವೈದ್ಯ ಸಾಗರ್ ವಿರುದ್ಧ ಕೂಡ ಎಫ್ಐಆರ್ ಹಾಕಲಾಗಿದೆ.
ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಎಂದು ಹೇಳಿದ್ದರೂ ಕೂಡ ಮೃತನ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿಗಳು ಹಣ ಕಟ್ಟಿಸಿಕೊಂಡಿದ್ದರು. ಸದ್ಯ ಇದಕ್ಕೆ ಸಾಕ್ಷಿ ಎನ್ನುವಂತೆ ಆಸ್ಪತ್ರೆಯಲ್ಲಿ ಕಟ್ಟಿದ ಬಿಲ್ ರಿಸಿಪ್ಟ್ ಲಭ್ಯವಾಗಿವೆ.
ಶನಿವಾರ ಸಂಜೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಗಾಯಾಳು ವೆಂಕಟೇಶ್ ದಾಖಲಾಗಿದ್ದ. ಈ ವೇಳೆ ಎಟಿಎಂ ಕಾರ್ಡ್ ಬಳಸಿ 40 ಸಾವಿರ ರೂ. ಕಟ್ಟಿದ್ದಾರೆ. ಸಂಜೆ 500 ರೂ. ಪಾವತಿಸಿದ್ದಾರೆ. ನಂತರ ಶನಿವಾರ ರಾತ್ರಿ ಪೋಷಕರು 4000 ರೂ. ಕಟ್ಟಿದ್ದಾರೆ. ಭಾನುವಾರದಂದು ಮತ್ತೆ ಫೋನ್ ಪೇ ಮೂಲಕ 15 ಸಾವಿರ ರೂ. ಕಟ್ಟಿದ್ದಾರೆ. ಆ ಮೂಲಕ ಸೇಂಟ್ ಜಾನ್ಸ್ ಆಸ್ಪತ್ರೆ ವಸೂಲಿಗೆ ಇಳಿದಿತ್ತು.
ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ಗಾಯಾಳು ವೆಂಕಟೇಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿ ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಡಿಸಿ ದಯಾನಂದ ಭೇಟಿ ನೀಡಿ ಮನವಿ ಆಲಿಸಿದ್ದರು.