ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಬಿಎಂಟಿಸಿ ಬಸ್ಗಳಲ್ಲಿ (BMTC) ಪ್ರತಿದಿನ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ಸಂಸ್ಥೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಮೆಟ್ರೋ ರೈಲುಗಳಲ್ಲಿ (Metro Train) ಇರುವಂತೆ ಇನ್ನು ಮುಂದೆ ಬಿಎಂಟಿಸಿ ಬಸ್ಗಳಲ್ಲೂ ನಗದು ರಹಿತ (Cashless) ಪ್ರಯಾಣಕ್ಕೆ ಅನುವು ಮಾಡಿಕೊಡಲು ‘ರಿಚಾರ್ಜಬಲ್ ಪ್ರಿಪೇಯ್ಡ್ ಕಾರ್ಡ್’ (Rechargeable prepaid Card) ಪರಿಚಯಿಸಲು ಸಂಸ್ಥೆ ನಿರ್ಧರಿಸಿದೆ.
ಹೌದು, ಬಸ್ಗಳಲ್ಲಿ ಪ್ರಯಾಣಿಸುವಾಗ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ನಡೆಯುವ ಚಿಲ್ಲರೆ ಹಣದ ಜಗಳಕ್ಕೆ ಈ ಕಾರ್ಡ್ಗಳು ಮುಕ್ತಿ ನೀಡಲಿವೆ. ಪ್ರಯಾಣಿಕರು ಒಮ್ಮೆ ಈ ಕಾರ್ಡ್ ಪಡೆದು ರೀಚಾರ್ಜ್ ಮಾಡಿಸಿಕೊಂಡರೆ, ಟಿಕೆಟ್ಗಾಗಿ ನಗದು ನೀಡುವ ಅಗತ್ಯವಿರುವುದಿಲ್ಲ. ಇದು ಸಮಯ ಉಳಿತಾಯದ ಜೊತೆಗೆ ಪ್ರಯಾಣವನ್ನು ಸುಗಮಗೊಳಿಸಲಿದೆ.
ಇನ್ನು ರಶ್ ಇರುವ ಸಮಯದಲ್ಲಿ ಬಸ್ ಹತ್ತಿ ಟಿಕೆಟ್ ಪಡೆಯುವುದು ದೊಡ್ಡ ಸವಾಲಾಗಿರುತ್ತದೆ. ಆದರೆ ಸ್ಮಾರ್ಟ್ ಕಾರ್ಡ್ ಮಾದರಿಯ ಈ ಕಾರ್ಡ್ ಅನ್ನು ಕೇವಲ ‘ಟ್ಯಾಪ್’ ಮಾಡುವ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಇದು ವಿಶೇಷವಾಗಿ ಕಚೇರಿಗೆ ಹೋಗುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
ಇತ್ತೀಚಿನ ದಿನಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವೇಳೆ ಎದುರಾಗುವ ತಾಂತ್ರಿಕ ದೋಷಗಳು ಅಥವಾ ಯುಪಿಐ ವಂಚನೆಗಳಿಗೆ ಹೋಲಿಸಿದರೆ ಈ ಪ್ರಿಪೇಯ್ಡ್ ಕಾರ್ಡ್ಗಳು ಅತ್ಯಂತ ಸುರಕ್ಷಿತವಾಗಿವೆ. ಪ್ರಯಾಣಿಕರು ತಮ್ಮ ಬಜೆಟ್ಗೆ ಅನುಗುಣವಾಗಿ ಕಾರ್ಡ್ ರೀಚಾರ್ಜ್ ಮಾಡಿಸಿಕೊಂಡು ನಿಶ್ಚಿಂತೆಯಿಂದ ಪ್ರಯಾಣಿಸಬಹುದು. ಬಿಎಂಟಿಸಿಯ ಈ ನಿರ್ಧಾರವು ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವತ್ತ ಮಹತ್ವದ ಹೆಜ್ಜೆಯಾಗಿದೆ.
ಕ್ಯಾಬ್ ಚಾಲಕರಿಗೆ ಇನ್ಮುಂದೆ ಕನ್ನಡ ಪಾಠ: ಭಾಷಾ ಸಂಘರ್ಷ ತಡೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಸ್ಟರ್ ಪ್ಲಾನ್!
ರಾಜ್ಯದಲ್ಲಿ ಅದರಲ್ಲೂ ಹೆಚ್ಚಾಗಿ ಬೆಂಗಳೂರಿನಲ್ಲಿ ಅನ್ಯಭಾಷಿಗರು ಮತ್ತು ಕನ್ನಡಿಗರ ನಡುವೆ ಪದೇ ಪದೇ ಸಂಭವಿಸುತ್ತಿರುವ ಭಾಷಾ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈಗ ಕಾರ್ಯಪ್ರವೃತ್ತವಾಗಿದೆ.
ವಿಶೇಷವಾಗಿ ಅನ್ಯಭಾಷಿಕ ಕ್ಯಾಬ್ ಚಾಲಕರಿಗೆ (Cab Drivers) ಕನ್ನಡ ಕಲಿಸುವ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಏರ್ಪಡಿಸಲು ಪ್ರಾಧಿಕಾರ ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಸಾರಿಗೆ ಇಲಾಖೆಗೆ ಪತ್ರ
ಸಾರ್ವಜನಿಕ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಸ್ಥಳೀಯ ಭಾಷೆಯ ಕನಿಷ್ಠ ಜ್ಞಾನವನ್ನು ಹೊಂದಿರುವುದು ಅತ್ಯಗತ್ಯ. ಈ ನಿಯಮ ಜಾರಿಯಲ್ಲಿದ್ದರೂ ಸಹ ಸರಿಯಾಗಿ ಅನುಷ್ಠಾನವಾಗದ ಕಾರಣ ಚಾಲಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ನಡೆಯುತ್ತಿವೆ.
ಈ ಸಂಬಂಧ ಸಾರಿಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಬಿಳಿಮಲೆ ಅವರು, 2016ರಲ್ಲಿ ಜಾರಿಗೆ ಬಂದಿರುವ ‘ಆನ್ ಡಿಮ್ಯಾಂಡ್ ಸೇವೆಗಳ ನಿಯಮ’ಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.
‘ದಿ ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್’ ನಿಯಮಗಳು 2016ರ ಉಪನಿಯಮ (8)ರ ಪ್ರಕಾರ, ಕರ್ನಾಟಕದಲ್ಲಿ ವಾಹನ ಚಾಲನೆ ಮಾಡುವ ಚಾಲಕನು ಈ ನಾಡಿನಲ್ಲಿ ಕನಿಷ್ಠ ಎರಡು ವರ್ಷ ವಾಸವಿರಬೇಕು. ಅಷ್ಟೇ ಅಲ್ಲದೆ, ಆತ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವವನಾಗಿರಬೇಕು ಮತ್ತು ನಾಗರಿಕರೊಂದಿಗೆ ಸಂಯಮದಿಂದ ವರ್ತಿಸುವ ಗುಣ ಹೊಂದಿರಬೇಕು ಎಂಬ ಅಂಶವನ್ನು ಕಡ್ಡಾಯಗೊಳಿಸಲಾಗಿದೆ.
ಕನ್ನಡ ಕಲಿಕೆಗೆ ಪ್ರಾಧಿಕಾರದ ಸಾಥ್
ಕನ್ನಡ ಬಾರದ ವಾಹನ ಚಾಲಕರನ್ನು ಒಂದೆಡೆ ಸೇರಿಸಿ ಅವರಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಸಾರಿಗೆ ಇಲಾಖೆ ಮಾಡಬೇಕು ಎಂದು ಬಿಳಿಮಲೆ ಅವರು ಸಲಹೆ ನೀಡಿದ್ದಾರೆ. ಈ ಕಾರ್ಯಕ್ಕೆ ಬೇಕಾದ ಪಠ್ಯ ಅಥವಾ ಬೋಧನಾ ಸಹಕಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೀಡಲಿದೆ.
ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಭಾಷಾ ಸಮಸ್ಯೆಗೆ ಇದು ಶಾಶ್ವತ ಪರಿಹಾರವಾಗಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಭಾಷೆಯ ಕಾರಣಕ್ಕಾಗಿ ನಗರದಾದ್ಯಂತ ಹಲವು ಬಾರಿ ಅಹಿತಕರ ಘಟನೆಗಳು ನಡೆದಿವೆ. ಪ್ರಾಧಿಕಾರದ ಈ ಹೊಸ ನಿರ್ಧಾರಕ್ಕೆ ಸಾರಿಗೆ ಇಲಾಖೆ ಮತ್ತು ಕ್ಯಾಬ್ ಅಗ್ರಿಗೇಟರ್ ಸಂಸ್ಥೆಗಳು ಯಾವ ರೀತಿಯಲ್ಲಿ ಸ್ಪಂದಿಸಲಿವೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.