ಬೆಂಗಳೂರು: ಸದಾ ನಮ್ಮ ದೇಶದ ವಿರುದ್ದ ಸಂಚು ರೂಪಿಸುವ ಚೀನಾ ದೇಶಕ್ಕೆ ಭಾರತದಿಂದ ಅದರಲ್ಲೂ ಕರ್ನಾಟಕದ ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಚೆನ್ನೈ ಮೂಲದ ಕಂಪನಿ ಹಾಗೂ ಐದು ಆರೋಪಿಗಳಿಗೆ ಬರೋಬ್ಬರಿ 89.05 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಾಲಯವು ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಚೆನ್ನೈನ ಮೆಸರ್ಸ್ ಮಿಂಕೋರ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ನ ಪಾಲುದಾರರಾದ ಸತಕ್ ಅಬ್ದುಲ್ ಖಾದರ್, ಅಬ್ದುಲ್ ರಝಿಕ್ ಮತ್ತು ಎಸ್ ಸೈಯದ್ ಇಬುನು ಮೌಲಾನಾ ಮತ್ತು ಬಳ್ಳಾರಿಯ ಹೊಸಪೇಟೆಯ ರಾಜದೇವ್ ಟ್ರಾನ್ಸ್ಪೋರ್ಟ್ನ ಮಾಲೀಕ ಡಿ ಸುಖದೇವ್ ಸಿಂಗ್ ಈ ಪ್ರಕರದಲ್ಲಿ ಶಿಕ್ಷೆಗೊಳಗಾದ ಅಪರಾಧಿಗಳು ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಇದು ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನೈದು ವರ್ಷಗಳ ಹಿಂದಿನ ಪ್ರಕರಣವಾಗಿದ್ದು, ಸುಧೀರ್ಘ ವಿಚಾರಣೆಯ ಬಳಿಕ ಇದೀಗ ಆರೋಪಿಗಳಿಗೆ ಶಿಕ್ಷೆಯಾಗಿದೆ. 2009 ಜನವರಿ ಆರಂಭದ ದಿನದಿಂದ 2010ರ ಮೇ ಅಂತ್ಯದ ವರೆಗೆ ಆರೋಪಿಗಳು ಗುಪ್ತ ಪ್ರದೇಶದಲ್ಲಿ 58.08 ಲಕ್ಷ ರೂಪಾಯಿ ಮೌಲ್ಯದ 1,849.77 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕದ್ದು ಸಂಗ್ರಹಿಸಿದ್ದು, ಅದನ್ನು ಬೆಲೆಕೇರಿ ಬಂದರಿನ ಮೂಲಕ ಚೀನಾಗೆ ರಫ್ತು ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಆರೋಪಿಗಳು ತೆರಿಗೆ ವಂಚಿಸಿ ರಫ್ತು ಮಾಡುತ್ತಿದ್ದ ಕಾರಣ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡವು 2016 ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿತು. ಬಳಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಆರೋಪಿಗಳ ಬಂಡವಾಳ ಬಯಲಾಗಿತ್ತು. ಬಳಿಕ ಆರೋಪಿಗಳು ತಾವು ನಿರಾಪರಧಿಗಳು ಎಂದು ವಿನಾಯಿತಿ ಕೇಳಿದರೂ ಕೂಡ ಅಂದಿನಿಂದ ಕೋರ್ಟ್ ಆರೋಪಿಗಳ ಮನವಿಯನ್ನು ನಿರಾಕರಿಸುತ್ತಾ ಬಂದಿತ್ತು. ಸುದೀರ್ಘ ವಿಚಾರಣೆಯ ಬಳಿಕ ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ.
ತೀರ್ಪಿನಲ್ಲಿ ಕೋರ್ಟ್ ಉಲ್ಲೇಖಿಸಿದ ಪ್ರಮುಖ ಅಂಶಗಳೇನು?: ಈ ಪ್ರಕರಣದ ಆರೋಪಿಗಳು ರಾಜ್ಯ ಖಜಾನೆಗೆ ವಂಚಿಸಿದ್ದಲ್ಲದೇ, ತಮ್ಮ ಕಾನೂನುಬಾಹಿರ ಗಣಿಗಾರಿಕೆ ಚಟುವಟಿಕೆಗಳ ಮೂಲಕ ಪರಿಸರಕ್ಕೆ ಹಾನಿಯುಂಟು ಮಾಡಿದ್ದಾರೆ. ಆರೋಪಿಗಳ ಈ ಕಾನೂನು ಬಾಹಿರ ಕೃತ್ಯದಿಂದ ಸರ್ಕಾರಕ್ಕೆ 58.29 ಲಕ್ಷ ರೂಪಾಯಿಗಳ ಅಕ್ರಮ ನಷ್ಟ ಉಂಟಾಗಿದೆ. ಹಾಗೂ ಆರೋಪಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120(ಬಿ), 379, ಮತ್ತು 420 ಹಾಗೂ 1957 ರ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 4(1ಎ) ಮತ್ತು 23 ಅನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಭಾರೀ ದಂಡ ವಿಧಿಸಿದೆ.