ಮಾಜಿ ಸಚಿವ ಈಶ್ವರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಡುವ ರೀತಿಯಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬ್ಯಾನರ್ ಹಾಕಿದ್ದಾರೆ. ಬಿಜೆಪಿಯ ಚಿಹ್ನೆ ಕೂಡಾ ಬಳಸದೆ ಹಾಕಿರುವ ಈ ಬ್ಯಾನರ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಆಝಾನ್ ಮತ್ತು ಅಲ್ಲಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಈಶ್ವರಪ್ಪ ಬಗ್ಗೆ ಆಕ್ಷೇಪವೆತ್ತಿದ್ದ ಎಂಎಲ್ಸಿ ಆಯನೂರು ಮಂಜುನಾಥ್, ಈಶ್ವರಪ್ಪ ಜವಾಬ್ದಾರಿಯಿಂದ ಮಾತಾಡಬೇಕು ಎಂದು ಹೇಳಿದ್ದರು.
ಅದರ ಬೆನ್ನಲ್ಲೇ, ಯುಗಾದಿ ಹಾಗೂ ರಂಜಾನ್ಗೆ ಶುಭಾಶಯ ಕೋರುವ ಬ್ಯಾನರ್ ಆಯನೂರ್ ಮಂಜುನಾಥ್ ಹಾಕಿಸಿದ್ದು, ಅದರಲ್ಲಿ “’ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ–ಸೌಹಾರ್ದತೆ ನೆಲೆಸಲಿ” ಎಂದು ಹಾರೈಸಿದ್ದರು.
ಈ ಬ್ಯಾನರ್ ಈಶ್ವರಪ್ಪ ವಿರುದ್ಧವೇ ಹಾಕಲಾಗಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಈ ಬ್ಯಾನರ್ ಮೂಲಕ ನೀಡುತ್ತಿರುವ ಸಂದೇಶವೇನು? ಇದು ಬಿಎಸ್ವೈ ಅವರ ಹೊಸ ಅಸ್ತ್ರವೇ?” ಎಂದು ಪ್ರಶ್ನಿಸಿದೆ.
ಅದಾಗ್ಯೂ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯನೂರು ಮಂಜುನಾಥ್, ಬ್ಯಾನರ್ನಲ್ಲಿ ಬಹುವಚನ ಬಳಸಲಾಗಿದೆ,ಅದು ಈಶ್ವರಪ್ಪ ಒಬ್ಬರಿಗೆ ಹೇಳಿದ ಮಾತಲ್ಲ ಎಂದಿದ್ದಾರೆ.
ಪಕ್ಷಕ್ಕೆ ಧಕ್ಕೆ ಬರುವ ಯಾವುದೇ ಮಾತುಗಳನ್ನು ಯಾವುದೇ ನಾಯಕರು ಹೇಳಿದರೂ ಅದನ್ನು ಸ್ವೀಕಾರ ಮಾಡಬೇಕೆಂಬ ಒತ್ತಡ ನಮಗೆ ಯಾರಿಗೂ ಇಲ್ಲ. ಸಂಘಟನೆಯ ಹಿತದೃಷ್ಟಿಯಿಂದ ನೀವು (ಈಶ್ವರಪ್ಪ) ಹೀಗೆ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ.