ನೈತಿಕ ಪೊಲೀಸ್ಗಿರಿಗೆ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಮತ್ತೆ ಭಜರಂಗದಳದ ನೈತಿಕ ಪೊಲೀಸ್ಗಿರಿ ಸದ್ದು ಮಾಡಿದೆ. ಈ ಬಾರಿ ಹೋಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ಕೇಸರಿ ಪಡೆಯ ಕೆಂಗಣ್ಣು ಬಿದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಬಳಿ ಹೋಳಿ ಸಂಭ್ರಮದ ಡಿಜೆ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಯುವಕ-ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ರು. ಈ ವೇಳೆ ಅಲ್ಲಿಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು, ಪಾರ್ಟಿಯಲ್ಲಿ ಅನ್ಯಕೋಮಿನ ಯುವಕರು ಇದ್ದಾರೆಂದು ರಾದ್ಶಾಂತ ಮಾಡಿದ್ದಾರೆ.
ಡಿಜೆ ಪಾರ್ಟಿ ಸ್ಥಳಕ್ಕೆ ಹೋಗಿ ಕಾರ್ಯಕ್ರಮದ ಬ್ಯಾನರ್ ಹರಿದು, ಅಲ್ಲಿದ್ದ ವಸ್ತುಗಳನ್ನು ಬಿಸಾಡಿ ದಾಂಧಲೆ ಎಸಗಿದ್ದಾರೆ. ಈ ವೇಳೆ ತಡೆಯಲು ಬಂದ ಆಯೋಜಕರು ಮತ್ತು ಭಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಪಾರ್ಟಿ ಮಾಡ್ತಿದ್ದವರ ಮೇಲೆ ಭಜರಂಗದಳವರು ಹಲ್ಲೆ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಭಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದು, ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.