ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರದ ಸಚಿವ ಸಂಪುಟ ರಚನೆಯ ಕಸರತ್ತು ತಾರಕಕ್ಕೇರಿರುವ ಬೆನ್ನಲ್ಲೇ, ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ನಾಯಕರು ಹೈಕಮಾಂಡ್ ವಿರುದ್ಧ ಬಂಡಾಯದ ಬಿಗ್ ವಾರ್ನಿಂಗ್ ನೀಡಿದ್ದಾರೆ.
ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಕ್ಷೇತ್ರದ ಜನಪ್ರಿಯ ಶಾಸಕ ವಿಜಯಾನಂದ್ ಎಸ್. ಕಾಶಪ್ಪನವರ್ ಅವರಿಗೆ ನೂತನ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಇಲಕಲ್ ಮತ್ತು ಹುನಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ತೀವ್ರ ಒತ್ತಾಯ ಮಾಡಿದೆ. ಒಂದು ವೇಳೆ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡದೇ ಹೋದರೆ ಹುನಗುಂದ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬಹಿರಂಗ ಎಚ್ಚರಿಕೆ ನೀಡುವ ಮೂಲಕ ರಾಜ್ಯ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರ ಮತ್ತು ಪ್ರಮುಖ ಮುಖಂಡರು ಮುಂಬರುವ ಸಚಿವ ಸಂಪುಟದ ಪಟ್ಟಿಯಲ್ಲಿ ಕಾಶಪ್ಪನವರ್ ಹೆಸರು ಇರಲೇಬೇಕೆಂದು ಬಿಗಿಪಟ್ಟು ಹಿಡಿದರು. ವಿಜಯಾನಂದ್ ಕಾಶಪ್ಪನವರ್ ಅವರ ಕುಟುಂಬವು ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದೆ. ಯುವ ನಾಯಕ, ಕ್ರಿಯಾಶೀಲ ಸಂಘಟಕ ಹಾಗೂ ನಿಷ್ಠಾವಂತ ಶಾಸಕರಾಗಿರುವ ಅವರಿಗೆ ಸಚಿವ ಸ್ಥಾನ ನೀಡಿದರೆ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಕನಿಷ್ಠ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆನೆ ಬಲ ಬರಲಿದೆ ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ನಾಯಕರು ಹೇಳಿದ್ರು
ಹೈಕಮಾಂಡ್ಗೆ ನೇರ ಸಂದೇಶ ರವಾನೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಮಾಡಿರುವ ಹುನಗುಂದ ನಾಯಕರು, ಪ್ರಮಾಣ ವಚನ ಸಮಾರಂಭದಲ್ಲೇ ಕಾಶಪ್ಪನವರ್ ಅವರಿಗೆ ಮಂತ್ರಿ ಪಟ್ಟ ಕಟ್ಟದಿದ್ದರೆ ತಾಲೂಕಿನ ಇಡೀ ಕಾಂಗ್ರೆಸ್ ಸಂಘಟನೆ ಮುಳುಗಲಿದೆ ಎಂಬ ನೇರ ಸಂದೇಶ ರವಾನಿಸಿದ್ದಾರೆ