ವಿಜಯಪುರದ ಕತ್ನಳ್ಳಿಯ ಬಬಲಾದಿ ಸದಾಶಿವ ಮುತ್ಯಾ ಮಠದ ಸ್ವಾಮೀಜಿ ಶಿವಯ್ಯನವರು ಯುಗಾದಿ ಹಬ್ಬದ ಬಳಿಕ ಹೇಳುವ ಭವಿಷ್ಯವಾಣಿಯಲ್ಲಿ ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುವ ಮುನ್ಸೂಚನೆ ಕಂಡು ಬಂದಿದೆ.
ಸದ್ದು ಇಲ್ಲದ್ದು, ಸುದ್ದಿಯಲಿ ಇದ್ದದ್ದು, ನಿದ್ದೆಯಲಿ ಇದ್ದದ್ದು, ಬುದ್ದಿಯಲ್ಲಿ ಇಲ್ಲದ್ದು, ಅಧಿಕಾರಿಕ್ಕಾಗಿ ಒಗ್ಗಟ್ಟು ಪ್ರದರ್ಶನ ನಡೆಯಲಿದೆ ಎಂಬ ಶಿವಯ್ಯನವರ ಭವಿಷ್ಯವಾಣಿಯನ್ನು ಅತಂತ್ರ ಸರ್ಕಾರ ನಿರ್ಮಾಣದ ಸೂಚನೆ ಎಂದೇ ವಿಶ್ಲೇಷಿಸುತ್ತಿದ್ದಾರೆ. ನೂರಾರು ವರ್ಷದ ಇತಿಹಾಸವಿರುವ ಬಬಲಾದಿ ಸದಾಶಿವ ಮಠದಲ್ಲಿ ಭವಿಷ್ಯ ಹೇಳುವ ದಿನ ಸ್ವಾಮೀಜಿಯನ್ನು ನದಿಯಿಂದ ಮಠದವರೆಗೆ ಹೊತ್ತು ತರಲಾಗುತ್ತದೆ. ಮಾರ್ಗಮಧ್ಯದಲ್ಲಿ ಸ್ವಾಮೀಜಿ ನಾಲ್ಕು ಬಾರಿ ಭವಿಷ್ಯ ನುಡಿಯುತ್ತಾರೆ. ಪ್ರಕೃತಿ ವಿಕೋಪಗಳು, ರಾಜ್ಯಡಳಿತ, ರೋಗರುಜಿನ, ಮಳೆಬೆಳೆ ಮುಂತಾದವುಗಳ ಬಗ್ಗೆ ಶ್ರೀಗಳು ನುಡಿಯುವ ಭವಿಷ್ಯ ಖಚಿತವಾಗಿರುತ್ತದೆ ಎಂಬುದು ಭಕ್ತರ ನಂಬಿಕೆ.
ಹಲವು ಜಿಲ್ಲೆಗಳಲ್ಲಿ ಭಕ್ತರನ್ನು ಹೊಂದಿರುವ ಬಬಲಾದಿ ಮಠದಲ್ಲಿ ಮದ್ಯ ಸಮರ್ಪಣೆ, ಮದ್ಯ ನೈವೇದ್ಯ ಹಾಗೂ ಮದ್ಯ ಸೇವನೆ ನಡೆಯುವುದೂ ಸಹ ಒಂದು ವಿಶೇಷ.
ಕಳೆದ ತಿಂಗಳಷ್ಟೇ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು, ಚುನಾವಣೆಯಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುತ್ತದೆ. ಪಕ್ಷಗಳು ಒಡೆಯುತ್ತದೆ. ಪಕ್ಷಾಂತರಗಳೂ ಆಗುತ್ತದೆ. ಆದರೆ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ನುಡಿದಿದ್ದರು.
ಅಧಿಕಾರಕ್ಕಾಗಿ ಒಗ್ಗಟ್ಟು ಹಾಗೂ ಒಂದೇ ಪಕ್ಷದ ಅಧಿಕಾರ ಎರಡೂ ಭವಿಷ್ಯವಾಣಿಗಳು ನಿಜವಾಗುವ ಸಾಧ್ಯತೆಯೂ ಸಹ ಇಲ್ಲದಿಲ್ಲ ಎಂದು ಭಕ್ತರು ನುಡಿದಿದ್ದಾರೆ.