ನೈರೋಬಿ: ಬುರುಂಡಿಯ ವಾಯವ್ಯ ಭಾಗದ ಸಿಬಿಟೋಕ್ ಪ್ರಾಂತ್ಯದಲ್ಲಿ ಸುರಿದ ಧಾರಾಕಾರ ಮಳೆಯು 13 ಕಾರ್ಮಿಕರನ್ನು ಬಲಿತೆಗೆದುಕೊಂಡಿದೆ.
ಭಾರೀ ಮಳೆಯಿಂದ ಚಿನ್ನದ ಗಣಿಯಲ್ಲಿ ನೀರು ತುಂಬಿದ್ದು, ಅದರಲ್ಲಿನ ಹೊಂಡಕ್ಕೆ ಬಿದ್ದು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹೊಂಡದಲ್ಲಿ ಬಿದ್ದ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪ್ರಾಂತ್ಯದ ಜಿಲ್ಲಾ ಆಡಳಿತಾಧಿಕಾರಿ ನಿಕೋಡೆಮೆ ಡಹಾಬೋನ್ಯಿಮನ ಹೇಳಿದ್ದಾರೆ.
ಬುರುಂಡಿಯ ವಾಯವ್ಯ ಮತ್ತು ಈಶಾನ್ಯ ಭಾಗಗಳಲ್ಲಿನ ಚಿನ್ನದ ಗಣಿಗಳಲ್ಲಿ ಇಂತಹ ದುರಂತಗಳು ಸಾಮಾನ್ಯ ಎಂಬಂತಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗುವ ಕಾರ್ಮಿಕರು ರಾತ್ರಿ ಸಮಯದಲ್ಲಿ ಕೆಲಸಕ್ಕೆ ಇಳಿಯುವುದೇ ಇಂತಹ ದುರಂತಗಳಿಗೆ ಕಾರಣ ಎನ್ನಲಾಗಿದೆ.