ಬೆಂಗಳೂರು: ಟಿಕೆಟ್ಗಾಗಿ ತೀವ್ರ ಕಸರತ್ತು ನಡೆಸುತ್ತಿರುವ ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಮೂರನೇ ಪಟ್ಟಿಯ ಲ್ಲಾದರೂ ತಮ್ಮ ಘೋಷಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುಮತ್ತೊಮ್ಮೆ ಭೇಟಿಯಾಗಿಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ದೆಹಲಿಗೆ ತೆರಳುವ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರ ನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್ ಜೊತೆ ತರಾತುರಿಯಲ್ಲಿ ಬಂದ ಅಖಂಡ ಶ್ರೀನಿವಾಸಮೂರ್ತಿ, ಟಿಕೆಟ್ ಕೈ ತಪ್ಪದಂತೆ ಬೆನ್ನಿಗೆ ನಿಲ್ಲಬೇಕೆಂದು ಅವರ ಬಳಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದವರೆಗೆ ಸಿದ್ದರಾಮಯ್ಯ ಜೊತೆಗೇ ತೆರಳಿದ್ದರು.
ಕೆಜಿ ಹಳ್ಳಿ, ಡಿಜಿ ಹಳ್ಳಿ ಘಟನೆಯ ಕಾರಣಕ್ಕೆ ಅಖಂಡ ಅವರಿಗೆ ಟಿಕೆಟ್ ಕೊಡಲು ಸಾಧ್ಯವಾಗದೇ ಇದ್ದರೆ, ನನಗೆ ಟಿಕೆಟ್ ಕೊಡಿ. ಅಷ್ಟೇ ಅಲ್ಲ, ಮಾಜಿ ಮೇಯರ್ ಸಂಪತ್ರಾಜ್ ಅವರಿಗೂ ಟಿಕೆಟ್ ನೀಡಬಾರದು. ಈ ಘಟನೆಯಲ್ಲಿ ಆರೋಪಿಯಾಗಿ ಸಂಪತ್ರಾಜ್ ಕೂಡಾ ಜೈಲು ಸೇರಿದ್ದರು ಎಂದು ಅಖಂಡ ಶ್ರೀನಿವಾಸಮೂರ್ತಿ ಸಹೋದರ ಶ್ರೀಧರ್ ರಾಮಯ್ಯ ಆಗ್ರಹಿಸಿದ್ದಾರೆ.