ಮಂಡ್ಯ : ಪಹಲ್ಗಾಮ್ ನಲ್ಲಿ ಪಾಕ್ ಪೋಷಿತ ಉಗ್ರರು ನಡೆಸಿದ ಹಿಂದೂಗಳ ನರಮೇಧ ಬಳಿಕ ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಪಾಕ್ನ ನಿರಂತರ ಅಪ್ರಚೋದಿತ ದಾಳಿಗೆ ಭಾರತವೂ ಪ್ರತ್ಯುತ್ತರ ನೀಡುತ್ತಲೇ ಇದೆ.
ಭಾರತ ಸೇನೆಯ ಸಿಂಧೂರ ಆಪರೇಷನ್ ಯಶಸ್ವಿ ಬಳಿಕ ಮತ್ತೆ ಯುದ್ಧದ ವಾತಾವರಣ ದುಪ್ಪಟಾಗಿದೆ. ಯುದ್ಧದ ಸನ್ನಿವೇಶ ಇರುವ ಇಂತಹ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಣುಸ್ಥಾವರಗಳು, ದೇಶದ ಪ್ರಮುಖ ಜಲಾಶಯಗಳಿಗೆ ಸೂಕ್ತ ಭದ್ರತೆವಹಿಸುವಂತೆ ಈಗಾಗಲೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಲಾಶಯಗಳ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಡ್ಯಾಂಗಳಿಗೆ ಅಪಾಯದ ಆತಂಕ ಸಾಧ್ಯತೆ ನಿಮಿತ್ತ ಕೇಂದ್ರದ ಆದೇಶದ ಮೇರೆಗೆ ಜಿಲ್ಲೆಯ KRS ಡ್ಯಾಂಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಜಲಾಶಯದ ಸುತ್ತಲೂ ಮತ್ತುಷ್ಟು ಭದ್ರತೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.
ಇನ್ನು ಬೃಂದಾವನಕ್ಕೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಪೊಲೀಸರ ತೀವ್ರ ನಿಗಾವಹಿಸಿದ್ದಾರೆ. ಪ್ರವಾಸಿಗರ ಎಲ್ಲಾ ವಸ್ತುಗಳನ್ನು ಪರೀಕ್ಷಿಸಿ ಡ್ಯಾಂ ಒಳಗೆ ಪ್ರವೇಶಿಸಲು ಸರ್ಕಾರ ಆದೇಶ ಮಾಡಿದೆ. ಕೆಲ ದಿನಗಳವರೆಗೆ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.