ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy )ಕೊಲೆ ಪ್ರಕರಣ ದಿನಕ್ಕೊಂದು ದೊಡ್ಡ ತಿರುವು ಪಡೆಯುತ್ತಿದ್ದು, ಇದೀಗ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆ ತೀವ್ರಗೊಂಡಿದೆ.ನಟ ದರ್ಶನ್ (Actor Darshan ) ಅವರನ್ನು ಪ್ರಕರಣದಿಂದ ಪಾರು ಮಾಡಲು ಸಾಕ್ಷಿ ನಾಶಕ್ಕೆ ಇಳಿದಿದ್ದ ದರ್ಶನ್ ಅಭಿಮಾನಿ ಸಂಘದ ಪ್ರಮುಖರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಈ ಇಡೀ ‘ಡೀಲ್’ ಹಿಂದೆ ಸಿನಿರಂಗದ ಅಥವಾ ರಾಜಕೀಯದ ಪ್ರಭಾವಿ ವ್ಯಕ್ತಿಗಳು ಇರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಚುರುಕಾಗಿದೆ.
ಸಾಕ್ಷಿ ನಂ. 49 ಸಂದೀಪ್ಗೆ ಬೆದರಿಕೆ..!
ಪ್ರಕರಣದ 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಕ್ಯಾಷಿಯರ್ ಸಂದೀಪ್ಗೆ ಇತ್ತೀಚೆಗೆ ಆಕರ್ಷ್ ಎಂಬಾತನ ಮೂಲಕ ಕರೆ ಮಾಡಿಸಿ, “ನಾವು ಹೇಳಿದಂತೆ ಕೋರ್ಟ್ನಲ್ಲಿ ಸಾಕ್ಷ್ಯ ನುಡಿಯಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಬಗ್ಗೆ ಸಂದೀಪ್ ನ್ಯಾಯಾಧೀಶರ ಮುಂದೆ ಧೈರ್ಯವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಅಭಿಮಾನಿ ಸಂಘದ ಸದಸ್ಯರಾದ ಸುಹಾಸ್, ವೇಣು ಮತ್ತು ಪುನೀತ್ ಎಂಬ ಮೂವರನ್ನು ಬಂಧಿಸಿದ್ದಾರೆ.
10 ದಿನ ಪೊಲೀಸ್ ಕಸ್ಟಡಿಯಲ್ಲಿ ಪುನೀತ್..!
ಬಂಧಿತರ ಪೈಕಿ ದರ್ಶನ್ ಅಭಿಮಾನಿ ಪುನೀತ್ನನ್ನು ಪೊಲೀಸರು 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾರೋ ಪ್ರಭಾವಿಗಳ ಸೂಚನೆ ಹಾಗೂ ಹಣದ ಆಮಿಷದ ಮೇರೆಗೆ ಈತ ಸಾಕ್ಷಿ ನಾಶದ ಡೀಲ್ ಕುದುರಿಸಲು ಮುಂದಾಗಿದ್ದ ಎನ್ನಲಾಗಿದ್ದು, ಈತ ಅಸಲಿ ಸತ್ಯ ಬಾಯಿ ಬಿಟ್ಟರೆ ದೊಡ್ಡ ತಲೆಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
ಕಾನ್ಫರೆನ್ಸ್ ಕಾಲ್ ರಹಸ್ಯ ಬಿಚ್ಚಿಡಲಿದೆ FSL ವರದಿ..!
ಸಾಕ್ಷಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ. ಡಿಲೀಟ್ ಮಾಡಲಾದ ಕರೆಗಳ ವಿವರ, ವಾಟ್ಸಾಪ್ ಚಾಟ್ ಹಾಗೂ ಆಡಿಯೋ ರೆಕಾರ್ಡಿಂಗ್ಗಳನ್ನು ಮರುಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ವರದಿ ಕೈಸೇರಲಿದೆ. ಬೆದರಿಕೆ ಹಾಕುವಾಗ ಬೆಂಗಳೂರಿನಿಂದ ಯಾರಾದರೂ ಕಾನ್ಫರೆನ್ಸ್ ಕಾಲ್ನಲ್ಲಿದ್ದರೇ ಎಂಬ ರಹಸ್ಯ ಇದರಿಂದ ಹೊರಬರಬೇಕಿದೆ.
ಡೀಲ್ ಕುದುರಿಸಿದವರಿಗೆ ಶುರುವಾಗಿದೆ ನಡುಕ..!
ಎಫ್ಎಸ್ಎಲ್ ತಾಂತ್ರಿಕ ವರದಿ ಬಂದ ತಕ್ಷಣವೇ, ಈ ಪ್ರಕರಣದ ಹಿಂದೆ ನಿಂತು ತಂತ್ರ ರೂಪಿಸಿದ ದೊಡ್ಡ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ಮುಖಾಮುಖಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕೋಟಿ ಕೋಟಿ ಹಣ ಹಿಡಿದು ಡೀಲ್ ಮಾಡಲು ಹೊರಟಿದ್ದ ಪ್ರಭಾವಿ ವಲಯದಲ್ಲಿ ಸದ್ಯ ತೀವ್ರ ಆತಂಕ ಮನೆಮಾಡಿದೆ.
ಇದನ್ನೂ ಓದಿ : ಬೆಂಗಳೂರು ಎಸ್ ಐ ಆರ್ ನಲ್ಲಿ ಹಗ್ಗಜಗ್ಗಾಟ – ರಾಜ್ಯ ಚುನಾವಣಾ ಆಯೋಗದ ನೀತಿಗೆ ಹೈಕೋರ್ಟ್ ಬ್ರೇಕ್?