ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಭಯೋತ್ಪಾದನಾ ನಿಗ್ರಹ ದಳವು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಿದೆ. ಫಿರೋಜಾಬಾದ್ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಕುಮಾರ್ ಬಂಧಿತ ಆರೋಪಿ.
ಯುಪಿ ಎಟಿಎಸ್ ಮುಖ್ಯಸ್ಥ ನೀಲಬ್ಜಾ ಚೌಧರಿ ಅವರು ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ್ದು, ರವೀಂದ್ರ ಕುಮಾರ್ ಗಂಗಾಯಣ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್-ವಿತರಣಾ ಡ್ರೋನ್ಗಳ ವಿಚಾರಣೆ ಸೇರಿದಂತೆ ಹಲವು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ರವೀಂದ್ರ ಕುಮಾರ್ನ ಸಹಚರನನ್ನೂ ಸಹ ಬಂಧಿಸಲಾಗಿದೆ.
ರವೀಂದ್ರ ಕುಮಾರ್ ‘ನೇಹಾ ಶರ್ಮಾ’ ಎಂಬ ಕೋಡ್ ನೇಮ್ ಹೊಂದಿದ್ದ ಐಎಸ್ಐ ಏಜೆಂಟ್ಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಎಂದು ಯುಪಿ ಎಟಿಎಸ್ ಮತ್ತು ಇತರೆ ಕಾನೂನು ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಆಗ್ರಾ ಘಟಕವು ರವೀಂದ್ರ ಕುಮಾರ್ನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿತು. ನಂತರ ಹೆಚ್ಚಿನ ವಿಚಾರಣೆಗಾಗಿ ಎಟಿಎಸ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ‘ನೇಹಾ’ ಎಂಬ ಹೆಸರಿನ ಹ್ಯಾಂಡ್ಲರ್ ಮೂಲಕ ರವೀಂದ್ರ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರವೀಂದ್ರ ಕುಮಾರ್ ತನ್ನ ಮೊಬೈಲ್ನಲ್ಲಿ ಈ ಹ್ಯಾಂಡ್ಲರ್ನ ನಂಬರ್ ಅನ್ನು ‘ಚಂದನ್ ಸ್ಟೋರ್ ಕೀಪರ್ 2’ ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದ ಎಂದು ನೀಲಬ್ಜಾ ಚೌಧರಿ ತಿಳಿಸಿದ್ದಾರೆ. ಶರ್ಮಾ ಮೊದಲು ಫೇಸ್ಬುಕ್ ಮೂಲಕ ಕುಮಾರ್ನನ್ನು ಸಂಪರ್ಕಿಸಿದ್ದಳು. ನಂತರ ವಾಟ್ಸಾಪ್ ಮೂಲಕ ಮಾಹಿತಿ ಪಡೆಯಲಾಗುತ್ತಿತ್ತು. ರವೀಂದ್ರ ಕುಮಾರ್ ಕೆಲಸ ಮಾಡುತ್ತಿದ್ದ ಶಸ್ತ್ರಾಸ್ತ್ರ ಕಾರ್ಖಾನೆಯ ದೈನಂದಿನ ಉತ್ಪಾದನಾ ವರದಿಗಳು ಸೇರಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.