ಮಂಡ್ಯ : ಬೊಲೆರೋ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಮಕ್ಕಳ ಎದುರೇ ತಾಯಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದ ಮಳವಳ್ಳಿ ಸಮೀಪ ನಡೆದಿದೆ. ಕುಂದೂರು ಗ್ರಾಮದ ನಿವಾಸಿ ಶಿಲ್ಪಾ ಮೃತ ದುರ್ದೈವಿ.
ಮಕ್ಕಳನ್ನು ಶಾಲೆಗೆ ಬಿಡಲು ಶಿಲ್ಪಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕೊಳ್ಳೇಗಾಲದ ರಸ್ತೆಯಲ್ಲಿ ಬೊಲೋರೋ ಡಿಕ್ಕಿ ಹೊಡೆದಿತ್ತು. ತಲೆಗೆ ಹೆಲ್ಮೆಟ್ ಧರಿಸಿದ್ದರೂ ಅಪಘಾತದ ರಭಸಕ್ಕೆ ಶಿಲ್ಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅನನ್ಯ(7) , ಮಾನ್ಯ (5) ಎಂಬ ಎರಡು ಪುಟ್ಟ ಕಂದಮ್ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿವೆ.
ಮಳವಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬೊಲೇರೋ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.