ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (Social media) ನಿರಂತರವಾಗಿ ವೈವಿಧ್ಯಮಯ ದೃಶ್ಯಗಳು ಹರಿದಾಡುತ್ತಿರುತ್ತವೆ. ಹೀಗೆ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಪುಟಾಣಿ ಮಕ್ಕಳ ವಿಡಿಯೋವೊಂದು ಸ್ಯಾಂಡಲ್ವುಡ್ (Sandalwood) ನಟಿ ರಮ್ಯಾ (Actress Ramya) ಅವರ ಗಮನ ಸೆಳೆದಿದೆ. ಸತ್ತ ಅಳಿಲಿನ ಮರಿಯನ್ನು ಕಂಡು ಭಾವುಕರಾದ ಮಕ್ಕಳ ನಡವಳಿಕೆಯನ್ನು ನೋಡಿ ಮೆಚ್ಚಿಕೊಂಡಿರುವ ಅವರು, ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಇಂತಹ ದಯಾವಂತ ಗುಣವಿರುವ ಮಕ್ಕಳನ್ನು ಬೆಳೆಸಬೇಕು ಎಂದು ಮನವಿ ಮಾಡಿದ್ದಾರೆ. ಮಾನ್ವಿ ಗೌಡ ಎಂಬುವವರು ಹಂಚಿಕೊಂಡಿರುವ ಈ ದೃಶ್ಯ ಸದ್ಯ ಇಂಟರ್ನೆಟ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹೌದು, ವೈರಲ್ ಆಗಿರುವ ಈ ವಿಡಿಯೋದಲ್ಲಿ, ಜೀವ ಕಳೆದುಕೊಂಡ ಅಳಿಲನ್ನು ಕಂಡು ಮಕ್ಕಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಒಬ್ಬ ಬಾಲಕ ಆ ಅಳಿಲನ್ನು ಕೈಯಲ್ಲಿ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ಗೌರವ ಸಲ್ಲಿಸಿದ್ದಾನೆ. ನಂತರ ಆ ಪುಟಾಣಿಗಳೆಲ್ಲರೂ ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿ, ಅಳಿಲನ್ನು ಮಣ್ಣು ಮಾಡಿ, ಅದರ ಮೇಲೆ ಹೂವಿನ ದಳಗಳನ್ನು ಅರ್ಪಿಸಿ ಸಮಾಧಿ ಮಾಡಿದ್ದಾರೆ. ಈ ಜೀವರಾಶಿಯ ಮೇಲಿನ ಅಪಾರ ಕರುಣೆಯನ್ನು ಕಂಡು ಮೋಹಕತಾರೆ ರಮ್ಯಾ ಅವರು ಈ ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಜ್ವರದಿಂದ ಬಳಲುತ್ತಿದ್ದ ಮಗುವನ್ನು ಬೆನ್ನ ಮೇಲೆ ಹೊತ್ತು 6 ಕಿ.ಮೀ ನಡೆದ ಶಿಕ್ಷಕಿ- VIDEO
ನಟಿ ರಮ್ಯಾ ಅವರ ಈ ಪ್ರತಿಕ್ರಿಯೆಗೆ ಈಗಾಗಲೇ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಹೃದಯಸ್ಪರ್ಶಿ ವಿಡಿಯೋವನ್ನು ಲಕ್ಷಾಂತರ ವೀಕ್ಷಕರು ವೀಕ್ಷಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವ ಮಕ್ಕಳ ಮಧ್ಯೆ, ಈ ಹುಡುಗನ ಸದ್ಗುಣ ಮತ್ತು ಒಳ್ಳೆಯ ಮನಸ್ಸು ನಿಜಕ್ಕೂ ಶ್ರೇಷ್ಠವಾದುದು ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಇಂದಿನ ಮಕ್ಕಳಲ್ಲಿ ಪರಿಸರ ಹಾಗೂ ಜೀವಿಗಳ ಮೇಲಿರುವ ಇಂತಹ ಮುಗ್ಧ ಕಾಳಜಿಯನ್ನು ನೋಡಿದಾಗ ದೇಶದ ಭವಿಷ್ಯ ಸುರಕ್ಷಿತವಾಗಿದೆ ಎಂಬ ಭರವಸೆ ಮೂಡುತ್ತದೆ ಎಂದು ಸಾರ್ವಜನಿಕರು ಕಮೆಂಟ್ ಮಾಡಿದ್ದಾರೆ.