ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ಹೋಗುತ್ತಿದ್ದಾನೆ ಎಂದು ಕೋಪಗೊಂಡ ಬಿಜೆಪಿ ನಾಯಕನೊಬ್ಬ ಕಾರ್ಯಕರ್ತನ ಮನೆಯ ಕಂಪೌಂಡ್ ಅನ್ನು ಧ್ವಂಸಗೊಳಿಸಿ, ಆತನ ತಾಯಿಯ ಮೇಲೆ ಬೆಂಬಲಿಗರೊಂದಿಗೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿ ಎಂಬಲ್ಲಿ ನಡೆದಿದೆ. ಮಹಿಳೆಯ ಮೇಲೆ ಬಿಜೆಪಿ ನಾಯಕ ಹಾಗೂ ಆತನ ಬೆಂಬಲಿಗ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನವೀನ್ ಎಂಬ ಕಾರ್ಯಕರ್ತ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು, ಅಲ್ಲದೆ, ಕಾಂಗ್ರೆಸ್ ಮುಖಂಡರೊಂದಿಗೆ ಪ್ರಚಾರಕ್ಕೂ ತೆರಳುತ್ತಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಾಚೋಹಳ್ಳಿ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮೇಶ್, ಜೆಸಿಬಿ ಮೂಲಕ ನವೀನ್ ಅವರ ಮನೆಯ ಕಂಪೌಂಡ್ ಒಡೆದು ಹಾಕಿದ್ದಾರೆ. ಇದನ್ನು ತಡೆಯಲು ಬಂದ ನವೀನ್ ತಾಯಿ ರಂಗಮ್ಮ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆಂಬಲಿಗನೊಂದಿಗೆ ಸೇರಿ ಹಲ್ಲೆ ಮಾಡಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ನವೀನ್ ಮನೆಗೆ ಕಂಪೌಂಡ್ ಕಟ್ಟಿಸಿದ್ದರು ಎನ್ನಲಾಗಿದೆ ಸದ್ಯ ಕಂಪೌಂಡ್ ನೆಲಸಮಗೊಂಡಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.