69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿರುವ ಬೇರೆ ರಾಜ್ಯದವರಿಗೆ ಕನ್ನಡವನ್ನು ಕಲಿಸಿಕೊಡಿ ಎಂದು ಸಿಎಂ ಸಿದ್ಧರಾಮಯ್ಯ ನವರು ಹೇಳಿದರು. ಇದೇ ವೇಳೆ ಇವತ್ತು ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗುತ್ತಿದೆ. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಕೊಡುವ ಎರಡನೇ ರಾಜ್ಯ ಎಂಬ ಹೆಗ್ಗಳಿಕೆ ಇದೆ. ಆದರೆ ನಮಗೆ ಕೇಂದ್ರದಿಂದ ವಾಪಾಸ್ ಬರ್ತಿರೋದು 45-50 ಸಾವಿರ ಕೋಟಿ ಮಾತ್ರ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದೀವಿ ಅನ್ನುವ ಕಾರಣಕ್ಕೆ ಅನ್ಯಾಯ ಮಾಡಬಾರದು ಎಂದು ಸಿಎಂ ಕಿಡಿಕಾರಿದರು.
ಈ ಬಗ್ಗೆ ಮಾತನಾಡಿದ ಅವರು, 1973 ನವೆಂಬರ್ 1 ರವರೆಗೆ ಮೈಸೂರು ರಾಜ್ಯ ಎಂದು ಹೆಸರಿತ್ತು. ಬಳಿಕ ದೇವರಾಜ್ ಅರಸ್ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಅಂತ ನಾಮಕರಣ ಆಯ್ತು. ಇಂದಿಗೆ ಮರುನಾಮಕರಣವಾಗಿ 51 ವರ್ಷಗಳು ಆಗಿದೆ ಎಂದರು.
ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆಗ ಇಂತಹ ದೊಡ್ಡ ಕಾರ್ಯಕ್ರಮವನ್ನು ಆಚರಿಸಬೇಕಿತ್ತು. ಆದರೆ ಅವರು ಆಯೋಜನೆ ಮಾಡದ ಹಿನ್ನಲೆ 51 ವರ್ಷ ಆದ್ರೂ ಆಚರಣೆ ಮಾಡ್ಬೇಕು ಅಂತ ಬಜೆಟ್ ನಲ್ಲಿ ಘೋಷಣೆ ಮಾಡಿದೆ.
ಹೀಗಾಗಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಯೋಜನೆ ಮಾಡಿದ್ದೇವೆ. ಇಡೀ ವರ್ಷ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಅನ್ನೋ ಘೋಷವಾಕ್ಯದೊಡನೆ ಕರ್ನಾಟಕ ಸಂಭ್ರಮ ದಿನವನ್ನು ಆಚರಣೆ ಮಾಡ್ತಿದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾಷೆಯ ವ್ಯಾಮೋಹ ಅತಿಯಾಗಬಾರದು, ಆದರೆ ಅಭಿಮಾನವನ್ನು ಬಿಟ್ಟುಕೊಡಬಾರದು, ಬೇರೆ ಭಾಷೆಯನ್ನೂ ಕಲಿಯಿರಿ, ಆದರೆ ಕನ್ನಡ ಮಾತನಾಡುವುದನ್ನು ಮರಿಬೇಡಿ. ಉದಾರಿತನವನ್ನು ವಿರೋಧ ಮಾಡಲ್ಲ, ಆದ್ರೆ ಭಾಷೆಯನ್ನು ಬಲಿಕೊಟ್ಟು ಉದಾರಿಯಾಗಬಾರದು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಹಿಯ್ಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತೆ, ನಾವು ಕನ್ನಡ ಬಳಸ್ತೇವೆ, ಬೇರೆಯವರಿಗೂ ಕನ್ನಡ ಕಲಿಸ್ತೇವೆ ಎಂದು ರಾಜ್ಯೋತ್ಸವ ದಿನ ಪ್ರತಿಜ್ಞೆ ಮಾಡೋಣ ಎಂದು ಸಿಎಂ ಹೇಳಿದರು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕನ್ನಡಕ್ಕೆ 2 ಸಾವಿರ ವರ್ಷದ ಇತಿಹಾಸವಿದೆ. ಇಂದಿನ ಯುವಕರೇ ನೀವು ನಮ್ಮ ಶಕ್ತಿ, ಇನ್ನು ಮುಂದೆ ಈ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ನಿಮ್ಮದು, ನಮ್ಮ ಸಂಸ್ಕೃತಿ ನಮ್ಮ ಭಾಷೆ ನಮ್ಮ ನೆಲೆಯನ್ನು ಕಾಪಾಡುವ ಕೆಲಸ ಮಾಡಬೇಕು ಎಂದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವರ್ಷದಿಂದ ಕಡ್ಡಾಯವಾಗಿ ಎಲ್ಲಾ ಸಂಸ್ಥೆಗಳಲ್ಲಿ ಕನ್ನಡ ಬಾವುಟ ಹಾರಿಸಬೇಕು ಅಂತ ಸರ್ಕಾರ ಮನವಿ ಮಾಡಿದೆ. ನೀವೆಲ್ಲಾ ನಮ್ಮ ದೇಶಕ್ಕೆ ಆಸ್ತಿ, ನೀವೆಲ್ಲಾ ನಿಮ್ಮ ತಂದೆ ತಾಯಿ, ಗೌರವಗಳನ್ನು ಉಳಿಸಿಕೊಂಡು ಹೋಗ್ತಿರೋ ಹಾಗೆ ಕನ್ನಡ ನಾಡು ನುಡಿ ಗೌರವ ವನ್ನು ಉಳಿಸಿಕೊಂಡು ಹೋಗಿ ಎಂದು ಡಿಕೆ ಹೇಳಿದರು