ರಾಂಚಿ: ಆನೆಗಳ ದಾಳಿಗೆ (Elephants Attack) ಒಂದು ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ ಆಘಾತಕಾರಿ ಘಟನೆ ಜಾರ್ಖಂಡ್ನ (Jharkhand) ಹಜಾರಿಬಾಗ್ (Hazaribag) ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಕಾಡಾನೆಗಳ ಹಿಂಡು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಜನರನ್ನು ತುಳಿದು ಕೊಂದಿವೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರಾದವರಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರಿದ್ದಾರೆ. ಒಂದು ಮಗು ಕೂಡ ಗಂಭೀರವಾಗಿ ಗಾಯಗೊಂಡಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಹಲವಾರು ಜನರ ಮೇಲೆ ದಾಳಿ ಮಾಡಿದ್ದ ಆನೆಗಳ ಹಿಂಡು ಗುರುವಾರ ರಾತ್ರಿ ಚುರ್ಚು ಬ್ಲಾಕ್ನ ಗೊಂಡ್ವಾರ ಗ್ರಾಮಕ್ಕೆ ನುಗ್ಗಿ ಶುಕ್ರವಾರ ಮುಂಜಾನೆ ಆರು ಜನರನ್ನು ತುಳಿದು ಕೊಂದಿದೆ ಎಂದು ಹಜಾರಿಬಾಗ್ ಪೂರ್ವ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ವಿಕಾಸ್ ಕುಮಾರ್ ಉಜ್ವಲ್ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಚಿಕಿತ್ಸೆಗಾಗಿ ಹಜಾರಿಬಾಗ್ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಈ ಹಿಂಡು ಕಳೆದ ಕೆಲವು ದಿನಗಳಿಂದ ಬೊಕಾರೊ, ರಾಮಗಢ ಮತ್ತು ಹಜಾರಿಬಾಗ್ ಜಿಲ್ಲೆಗಳಲ್ಲಿ ಸುತ್ತಾಡುತ್ತಿತ್ತು ಮತ್ತು ಈ ಹಿಂದೆ ಬೊಕಾರೊದಲ್ಲಿ ಸಾವುನೋವುಗಳನ್ನುಂಟು ಮಾಡಿತ್ತು ಎಂದು ಉಜ್ವಲ್ ಹೇಳಿದ್ದಾರೆ.
ಇದನ್ನೂ ಓದಿ : ಬಾಲಕಿಯ ಬೆರಳು ತುಂಡಾದರೂ ಶಾಲೆಯ ನಿರ್ಲಕ್ಷ್ಯ – ತುಂಡು ಬೆರಳಿಗಾಗಿ ಪೋಷಕರ ಪರದಾಟ!