ಬೆಂಗಳೂರು: ಕರ್ನಾಟಕ ಸರ್ಕಾರವು ಸಿನಿಮಾ, ಒಟಿಟಿ ಸಬ್ಸ್ಕ್ರಿಪ್ಷನ್ ಮೇಲೆ ಶೇಕಡ 2ರಷ್ಟು ಸೆಸ್ ವಿಧಿಸಲು ನಿರ್ಧರಿಸಿದ್ದು, ಅದಕ್ಕೆ ಕನ್ನಡ ಚಿತ್ರರಂಗ ವಿರೋಧ ವ್ಯಕ್ತಪಡಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, “ತೆರಿಗೆ ಹೆಚ್ಚಳದ ಬಗ್ಗೆ ನಾವು ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದೆವು. ನಿರ್ಮಾಪಕರು ಸಂಕಷ್ಟದಲ್ಲಿದ್ದು, ಸಿನಿಮಾರಂಗ ದಿನೇ ದಿನೇ ಮುಳುಗುತ್ತಿದೆ. ಹೀಗಾಗಿ ತೆರಿಗೆ ಕಡಿಮೆ ಮಾಡುವಂತೆ ನಾವು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ. ಕನ್ನಡ ಸಿನಿಮಾಗಳಿಗೆ ಸೆಸ್ ಹಾಕಬೇಡಿ ಎಂದು ಒತ್ತಾಯ ಮಾಡಿದ್ದೇವೆ. ಬೇರೆ ಭಾಷೆಯ ಸಿನಿಮಾಗಳಿಗೆ ಹಾಕೋದು ಅವರ ಇಷ್ಟ” ಎಂದು ಮಂಡಳಿ ಪ್ರಮುಖರು ತಿಳಿಸಿದ್ದಾರೆ
“ನಿರ್ಮಾಪಕರ ಮೇಲೆ ಭಾರ ಹಾಕಿ ಕಾರ್ಮಿಕರ ಕಲ್ಯಾಣ ನಿಧಿಗೆ ಕೊಡುತ್ತಾರೆ. ನಿಧಿಗೆ ಹಣ ಕೊಡಲು ನಮ್ಮ ವಿರೋಧವಿಲ್ಲ, ಆದರೆ ನಿರ್ಮಾಪಕರಿಗೆ ತೆರಿಗೆ ಹೆಚ್ಚಳ ಬೇಡ. 637 ಥಿಯೇಟರ್ಗಳ ಪೈಕಿ 130 ಥಿಯೇಟರ್ಗಳು ಮುಚ್ಚುವ ಹಂತಕ್ಕೆ ಬಂದಿದೆ. ಜನ ಥಿಯೇಟರ್ನತ್ತ ಬರುತ್ತಿಲ್ಲ. ಹೀಗಾಗಿ ಸಿಎಂ ಹಾಗೂ ಕಾರ್ಮಿಕ ಸಚಿವರಿಗೆ ನಾವು ಮನವಿಯನ್ನು ನೀಡಿದ್ದೇವೆ” ಎಂದು ಮಂಡಳಿಯ ಅಧ್ಯಕ್ಷರಾದ ಎನ್.ಎಂ. ಸುರೇಶ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಮಂಡಳಿಯ ಇನ್ನುಳಿದ ಪದಾಧಿಕಾರಿಗಳು ಭಾಗಿಯಾಗಿದ್ದರು.